ಪ್ರಯತ್ನ ಪರಿಶ್ರಮದಿಂದ ಪ್ರಗತಿ ಸಾಧ್ಯ : ರಂಭಾಪುರಿಶ್ರೀ

ಪ್ರಯತ್ನ ಪರಿಶ್ರಮದಿಂದ ಪ್ರಗತಿ ಸಾಧ್ಯ : ರಂಭಾಪುರಿಶ್ರೀ
ವೀರಮಾರ್ಗ ನ್ಯೂಸ್ ಕಲಬುರ್ಗಿ :
ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಗಳಿಸಿದ ಸಂಪತ್ತು ಸತ್ಕಾರ್ಯಗಳಿಗೆ ಸಲ್ಲಬೇಕು. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಅದ್ಭುತ ಪ್ರಗತಿ ಕಾರ್ಯ ಮಾಡಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಬಬಲಾದ(ಎಸ್) ಗ್ರಾಮದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶ್ರೀ ಮಲ್ಲಿಕಾರ್ಜುನ ಬೃಹನ್ಮಠದ 61ನೇ ಜಾತ್ರಾ ಮಹೋತ್ಸವ ಹಾಗೂ ಸಿದ್ಧಶ್ರೀ ಸಭಾ ಭವನ ಲೋಕಾರ್ಪಣೆ ಅಂಗವಾಗಿ ಜರುಗಿದ ಧರ್ಮ ಸಂಸ್ಕೃತಿ ಸಂವರ್ಧನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ದೇಶ ಮನುಷ್ಯನ ಎರಡು ಕಣ್ಣು. ನೀತಿ ನಿಯಮ ಇಲ್ಲದೇ ಸಮಾಜ ನಾಡು ಬೆಳೆಯಲಾರದು. ಧರ್ಮ ಮತ್ತು ಧರ್ಮಾಚರಣೆಯಿಂದ ಮಾನವನ ಬದುಕು ಉಜ್ವಲಗೊಳ್ಳುತ್ತದೆ. ಹಣ ಅಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ದೇಶ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಚಿಂತಿಸಲಾರ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮ ಬೇಕು. ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಜಾತ್ರಾ ಮಹೋತ್ಸವದಿಂದ ಪರಸ್ಪರ ಸಾಮರಸ್ಯ ಸೌಹಾರ್ದತೆ ಬೆಳೆದು ಬರಲು ಸಹಕಾರಿಯಾಗುತ್ತದೆ. ಮನುಷ್ಯ ಜೀವನದಲ್ಲಿ ಸಾಧನೆ ಮಾತನಾಡಬೇಕು. ಆದರೆ ಮಾತನಾಡುವುದೇ ಸಾಧನೆಯಾಗಬಾರದು. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ಮಠದ ಅಧಿಕಾರ ಸೂತ್ರ ಅನುಗ್ರಹಿಸಿದ ನಂತರ ಬಹಳಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಕ್ರಿಯಾಶೀಲ ಬದುಕಿಗೆ ಭವ್ಯ ಸುಂದರವಾಗಿ ತಲೆ ಎತ್ತಿ ನಿಂತ ಸಿದ್ಧಶ್ರೀ ಸಭಾ ಭವನ ಸಾಕ್ಷಿಯಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಇನ್ನಷ್ಟು ಸತ್ಕಾರ್ಯಗಳು ನಡೆಯುವಲ್ಲಿ ಯಾವುದೇ ಸಂದೇಹ ಇಲ್ಲವೆಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ರೇಶ್ಮೆ ಮಡಿ ಫಲ ಪುಷ್ಪದೊಂದಿಗೆ “ವೀರಶೈವ ಧರ್ಮ ರತ್ನ” ಎಂಬ ಪ್ರಶಸ್ತಿಯಿತ್ತು ಶುಭ ಹಾರೈಸಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸಭಾ ಭವನ ಉದ್ಘಾಟಿಸಿ ಮಾತನಾಡಿ ಶ್ರೀ ಮಠದ ಚಾರಿತ್ರಿಕ ಇತಿಹಾಸದಲ್ಲಿ ಈ ದಿನ ಅವಿಸ್ಮರಣೀಯ ದಿನ. ಶ್ರೀಗಳವರ ಬಹು ದಿನಗಳ ಕನಸು ನನಸಾದ ಸುದಿನ. ಶ್ರೀಗಳವರ ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಅದ್ಭುತ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದದ ಬಲ ಶ್ರೀಗಳವರ ಮೇಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಧರ್ಮ ಸಮಾರಂಭ ಉದ್ಘಾಟಿಸಿದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ ಬೆಟ್ಟ ಎಂದಿಗೂ ಬಾಗುವುದಿಲ್ಲ. ಆದರೆ ಕಷ್ಟಪಟ್ಟು ಏರಿದ ಮೇಲೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ. ಹಿಂದು ಗುರು ಮುಂದೆ ಗುರಿ ಇದ್ದಾಗ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಶಿವಮೂರ್ತಿ ಶ್ರೀಗಳು ರಚನಾತ್ಮಕ ಕಾರ್ಯಗಳ ಮೂಲಕ ಭಕ್ತ ಸಂತೃಪ್ತಿಗೆ ಪಾತ್ರರಾಗಿದ್ದಾರೆಂದು ಶ್ಲಾಘಿಸಿದರು. ನೇತೃತ್ವ ವಹಿಸಿದ ಮಠಾಧ್ಯಕ್ಷರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರು ತಮ್ಮ ಏಳ್ಗೆಯನ್ನಷ್ಟೇ ಬಯಸಿ ಬಾಳುತ್ತಾರೆ. ಆದರೆ ದೇಶದ ಅಭಿವೃದ್ಧಿ, ಬಡ ಜನರ ಕಲ್ಯಾಣ, ದೇಶ ಕಾಯುವ ಸೈನಿಕರ ಚಿಂತನ, ಅನ್ನ ನೀಡುವ ರೈತನ ಬಗ್ಗೆ ಯಾರೂ ಚಿಂತಿಸುವುದಿಲ್ಲ. ನಿತ್ಯದಲ್ಲಿ ಅರ್ಧ ಗಂಟೆ ಯೋಚಿಸಿ ಕಾರ್ಯೋನ್ಮುಖರಾದರೆ ಅದ್ಭುತ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಮಠಗಳು ಸಹ ಸಕಲ ಭಕ್ತರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕೈಗೊಂಡಿದ್ದು ತೃಪ್ತಿ ತಂದಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದ ಶಕ್ತಿ ನಮಗೆ ಆನೆ ಬೆಲ ತಂದು ಕೊಟ್ಟಿದೆ ಎಂದು ಭಾವನಾತ್ಮಕವಾಗಿ ನುಡಿದರು.

ಈ ಪವಿತ್ರ ಸಮಾರಂಭದಲ್ಲಿ ಕಲಬುರ್ಗಿ ಡಾ||ರಾಜಶೇಖರ ಶ್ರೀಗಳು, ಅಂಕಲಗಿ ಅಭಿನವ ಗುರುಬಸವ ಶ್ರೀಗಳು, ಹೆಡಗಿಮುದ್ರಾ ಶಾಂತಮಲ್ಲಿಕಾರ್ಜುನ ಶ್ರೀಗಳು, ಶ್ರೀನಿವಾಸ ಸರಡಗಿ ರೇವಣಸಿದ್ಧ ಶ್ರೀಗಳು,ತೊನಸನಹಳ್ಳಿ ರೇವಣಸಿದ್ಧ ಚರಂತೇಶ್ವರ ಶ್ರೀಗಳು, ರಾಜೇಶ್ವರ ಘನಲಿಂಗ ರುದ್ರಮುನಿ ಶ್ರೀಗಳು, ನವಲಕಲ್ ಅಭಿನವ ಸೋಮನಾಥ ಶ್ರೀಗಳು, ಪಾಲ್ಗೊಂಡು ಸಮ್ಮುಖ ವಹಿಸಿ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಆರ್.ಪಾಟೀಲ(ಆಳಂದ), ಎಂ.ವೈ.ಪಾಟೀಲ(ಅಫಜಲಪುರ), ಶರನಗೌಡ ಕಂದಕೂರು (ಗುರುಮಠಕಲ್), ಕೆ.ಕೆ.ಸಿ.ಸಿ.ಅಧ್ಯಕ್ಷ ಶರಣು ಪಪ್ಪಾ, ಮಾಜಿ ಸಚಿವ ನರಸಿಂಹನಾಯಕಕ(ರಾಜೂಗೌಡ), ಚಂದು ಪಾಟೀಲ, ನೀಲಕಂಠರಾವ ಮೂಲಗೆ, ಬಿ.ಎಂ.ಹಳಿಕೋಟೆ, ರಾಜಾ ಹನುಮಪ್ಪನಾಯಕ ತಾತಾ, ಹೆಚ್.ಸಿ.ಪಾಟೀಲ, ಲಿಂಗರಜ ಅಪ್ಪ, ಸಂತೋಷ ಬಿಲಗುಂದಿ, ಶಿವಶರಣಪ್ಪ ಸೀರಿ, ಸಂತೋಷ ಪಾಟೀಲ, ಡಾ.ವಿಕ್ರಂ ಪಾಟೀಲ ವಿಶೇಷ ಆಹ್ವಾನಿತರಾಗಿ ಬೆಂಗಳೂರು ಕೆ.ಪಿ.ಎಸ್.ಸಿ.ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ, ಬಿಬಿಎಂಪಿ ಇಇ ಚನ್ನಬಸಪ್ಪ ಮೆಕಾಲೆ ಭಾಗವಹಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಆಶೀರ್ವಾದ ಪಡೆದರು.
ಡಿ.ಸಿ.ಸಿ.ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಬಲಾದ ಗ್ರಾಮದ ಮಂಜುನಾಥ ಕಾಳೆ ಸ್ವಾಗತಿಸಿದರು. ಜಾಲಿಬೆಂಚಿ ಅಮರಯ್ಯಸ್ವಾಮಿ ನಿರೂಪಣೆ ಮಾಡಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

Leave a Reply

Your email address will not be published. Required fields are marked *