ಇಂದು ಭಾವೈಕ್ಯತಾ ದಿನಾಚರಣೆ.( ಲಿಂ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಜನ್ಮದಿನ)

ವೀರಮಾರ್ಗ ನ್ಯೂಸ್ : ಸ್ವಾಮೀಜಿಯವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನಿಸಿದರು. 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ತಮ್ಮ ಧಾರ್ಮಿಕ ಶಿಕ್ಷಣವನ್ನು ಸಿಂದಗಿ, ಶಿವಮಂದಿರ, ಹುಬ್ಬಳ್ಳಿಗಳಲ್ಲಿ ಪೂರೈಸಿದರು.

ಪೀಠಾರೋಹಣ : ಸ್ವಾಮೀಜಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇಯ ಪೀಠಾಧಿಪತಿಗಳಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ 1974 ಜುಲೈ 29 ರಂದು ಅಧಿಕಾರ ವಹಿಸಿಕೊಂಡರು. ಆ ದಿನ ಧಾರ್ಮಿಕ ಇತಿಹಾಸದಲ್ಲೆ ಒಂದು ಹೊಸ ಅಧ್ಯಾಯ ಆರಂಭವಾಯಿತು. ಶ್ರೀಗಳು ಅಂದಿನಿಂದ ಇಂದಿನವರೆಗೆ ‘ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ನಿರಂತರ ಸಮಾಜಸೇವೆಗಾಗಿ ಸಂಚರಿಸಿ ನಾಡನ್ನು ಸುತ್ತಿ ಜನಮಾನಸವನ್ನು ತಿದ್ದಿ-ತೀಡಿದ್ದಾರೆ.

ದಲಿತೋದ್ಧಾರ: ದೀನದಲಿತರ, ನೊಂದವರ, ಶೋಷಿತರ ಸೇವೆಯೇ ಲಿಂಗಪೂಜೆಯೆಂದರಿತ ಶ್ರೀಗಳು ಸಾಮಾನ್ಯರ ನೋವಿಗೆ ಸ್ಪಂದಿಸಿದರು. ಸಕಲ ಜೀವಾತ್ಮರಿಗೆ ಲೇಸು ಬಯಸುವವರೇ ಕುಲಜರು ಎಂಬ ಬಸವ ಸಂದೇಶವನ್ನು ಅಕ್ಷರಶಃ ಜಾರಿಗೆ ತಂದರು. ತಮ್ಮ ಮಠದ ಬಾಗಿಲನ್ನು ಎಲ್ಲಾ ಜನಾಂಗದವರಿಗೆ ಮುಕ್ತವಾಗಿರಿಸಿದರು. ಮಠದಲ್ಲಿ ಶ್ರೀಗಳು ತಮ್ಮ ಕಾರ್ಯಗಳಿಂದ ಧರ್ಮಕ್ಕೆ ಹೊಸ ವ್ಯಾಖ್ಯೆಯನ್ನು ಕಲ್ಪಿಸಿ, ಅದರ ಹರಿವನ್ನು ವಿಸ್ತರಿಸಿದರು.

ಶ್ರೀಗಳು ಮೂಢನಂಬಿಕೆ ಕಂದಾಚಾರಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಸಾಮಾಜಿಕ ಪರಿವರ್ತನೆಗೆ ಕಾರಣರಾಗಿದ್ದಾರೆ. ದಲಿತರು ಅಲ್ಪಸಂಖ್ಯಾತರು ಶ್ರೀಮಠದ ಅವಿಭಾಜ್ಯ ಅಂಗವಾಗಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಮಹೋನ್ನತ ಕಾರ್ಯ ಮಾಡುತ್ತಲಿದ್ದಾರೆ. ಪರಿಣಾಮ ದಲಿತ, ಹಿಂದುಳಿದ ವ್ಯಕ್ತಿಗಳು ಶ್ರೀಮಠದ ದಾಸೋಹದಲ್ಲಿ ಪ್ರಸಾದ ವಿತರಣೆಗೆ ತೊಡಗಿದರು, ವಚನ ರಚಿಸಿದರು. ಕೆಳವರ್ಗದ ಓರ್ವ ಸಾಮಾನ್ಯ ವ್ಯಕ್ತಿ ಅಂಬೇಡ್ಕರ್ ಪುರಾಣಾದಿಯಾಗಿ ಹತ್ತಾರು ಪುರಾಣ ಕಾವ್ಯಗಳನ್ನು ರಚಿಸಿದರು. ದಲಿತ ಭಕ್ತರು ಶ್ರೀಮಠದ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಆ ಕಾರ್ಯವನ್ನು ಸಮರ್ಥವಾಗಿ ಮುನ್ನಡೆಸಿದರು. ದಲಿತ, ಹಿಂದುಳಿದ ಜನಾಂಗದ ವಿದ್ಯಾರ್ಥಿಗಳನ್ನು ಮಠದಲ್ಲಿಟ್ಟುಕೊಂಡು ಮಠಾಧೀಶರನ್ನಾಗಿ ಮಾಡಿದರು.

ಶ್ರೀಗಳು ಹರಿಜನಕೇರಿ, ಡೋಣಿ ತಾಂಡಾಗಳನ್ನು ದತ್ತು ತೆಗೆದುಕೊಂಡರು. ಶ್ರೀಗಳ ಸಂಪರ್ಕಕ್ಕೆ ಬಂದ ಹರಿಜನ-ಲಂಬಾಣಿ ಬಂಧುಗಳು ವ್ಯಸನಮುಕ್ತರಾಗಿ ತಮ್ಮ ಸುಂದರ ಬದುಕನ್ನು ಕಟ್ಟಿಕೊಂಡರು. ಶ್ರೀಮಠದಲ್ಲಿ ಅಂತರ್ಜಾತಿ ವಿವಾಹವಲ್ಲದೆ ಅಸಂಖ್ಯಾತ ಸಾಮೂಹಿಕ ವಿವಾಹಗಳಾದವು. ಅಸ್ಪೃಶ್ಯರ ಹಕ್ಕುಗಳ ಮೇಲೆ ಸವಾರಿ ಮಾಡಲೆತ್ನಿಸಿದ ಪುರೋಹಿತಶಾಹಿಗಳಿಗೆ ಮುಖಭಂಗವಾಯಿತು. ಶತ-ಶತಮಾನಗಳಿಂದ ಅವಮಾನಕ್ಕೆ ತುತ್ತಾದ ದೆಹಲಿಯ ಕರೋಲಭಾಗದ ಜಾಟವಾ ಜನಾಂಗದ ಅಪಾರಸಂಖ್ಯೆಯ ಬಂಧುಗಳಿಗೆ ಬಸವಧರ್ಮ ದೀಕ್ಷೆ ನೀಡುವ ಮೂಲಕ ಕನ್ನಡನಾಡಿನಾಚೆಗೂ ಬಸವತತ್ವ ಪ್ರಸಾರ ಕೈಗೊಂಡರು.

ಶಿವಾನುಭವ_ವೇದಿಕೆ : ಶ್ರೀಗಳು ಕಳೆದ 38 ವರ್ಷಗಳಿಂದ ಗದಗ ಮಠದಲ್ಲಿ ಒಂದೇ ಒಂದು ವಾರವೂ ನಿಲ್ಲದಂತೆ ಪ್ರತಿ ಸೋಮವಾರ ನಡೆಸಿಕೊಂಡು ಬಂದ ಶಿವಾನುಭವ ಕಾರ್ಯಕ್ರಮ ಒಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಬಹುಶಃ ಕರ್ನಾಟಕ ಅಷ್ಟೇ ಏಕೇ? ಭಾರತ ದೇಶದ ಯಾವೊಂದು ಸಂಸ್ಥೆಯು ಇಂತಹ ಕಾರ್ಯಕ್ರಮ ಮಾಡಿಲ್ಲ. ಇಲ್ಲಿ ಸಮಾನತೆ ತಂಗಾಳಿ ಬೀಸಿದೆ. ಈ ವೇದಿಕೆ ಹಿಂದೂ, ಮುಸಲ್ಮಾನ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಪಾರ್ಸಿ ಮುಂತಾದ ಧರ್ಮಗಳ ಆಡಂಬೋಲವಾಗಿದೆ. ಎಲ್ಲಾ ರಂಗದ ಪ್ರತಿಭೆಗಳು ಇಲ್ಲಿ ಪ್ರಕಾಶಿಸಿವೆ. ಇದು ಸರ್ವ ಮತಭಾಂದವರ ವಿಚಾರ ವೇದಿಕೆಯಾಗಿ ಮಾರ್ಪಟ್ಟು ಸರ್ವಸಮಾನತೆ ಪ್ರೀತಿ ವಿಶ್ವಾಸಗಳ ಒಂದು ಟಂಕಶಾಲೆಯಾಗಿದೆ.

ಕಾಯಕ_ದಾಸೋಹ : ಬಸವಧರ್ಮ ವೃಕ್ಷದ ತಾಯಿಬೇರಾದ ಕಾಯಕ-ದಾಸೋಹದಲ್ಲಿ ಅಚಲ ಶ್ರದ್ಧೆಯನ್ನಿರಿಸಿದ ಶ್ರೀಗಳು ಸ್ವತಃ ಗುದ್ದಲಿ ಹಿಡಿದು ಡಂಬಳದಲ್ಲಿ ಕೈಯಾರೆ ಬಾವಿತೋಡಿ, ಉತ್ತಿ-ಬಿತ್ತಿ ಕೃಷಿಕರಾಗಿ ದುಡಿದರು. ಕೃಷಿಗೆ ಪ್ರಗತಿಪರ ವೈಜ್ಞಾನಿಕ ತಳಹದಿಯನ್ನು ಒದಗಿಸಿ ಅವರಿಗೆ ಮಾರ್ಗದರ್ಶಕರಾದರು. ದಾಸೋಹ ತತ್ವದಲ್ಲಿ ಅಪಾರ ನಂಬಿಕೆ ಇರುವ ಶ್ರೀಗಳು ಎಡೆಯೂರು ಕ್ಷೇತ್ರ, ಕಗ್ಗೆರೆ, ಡಂಬಳ, ಗದಗ, ಹಾವೇರಿ ಹಾಗೂ ಇತರ ಶಾಖಾಮಠಗಳಲ್ಲಿ ಅವರ ಜಾತಿ-ಮತ-ಬೇಧ ನೋಡದೆ, ಪಂಕ್ತಿ ಬೇಧವಿಲ್ಲದೆ ನಿರಂತರ ಅನ್ನದಾಸೋಹವನ್ನು ನಡೆಸಿಕೊಂಡು ಬಂದಿದ್ದಾರೆ.

ಕನ್ನಡದ_ಜಗದ್ಗುರು : ವಿದ್ಯಾರ್ಥಿ ಜೀವನದಿಂದಲೂ ಕನ್ನಡ ಪ್ರೀತಿಯ ಉಜ್ವಲ ಹಣತೆಯನ್ನು ಬೆಳಗಿಸುತ್ತ ಬಂದ ಶ್ರೀಗಳು ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಘರ್ಜಿಸಿದ್ದಾರೆ. ಅವರು 1980ರಲ್ಲಿ ಸಿಂದಗಿಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿದ ಭಾಷಣದ ಕಿಡಿಯೇ ಮುಂದೆ ಗೋಕಾಕ್ ಚಳುವಳಿಗೆ ನಾಂದಿಯಾಯಿತು. ಗೋಕಾಕ್ ವರದಿ ಅನುಷ್ಠಾನಕ್ಕಾಗಿ ಶ್ರೀಗಳು ಹೋರಾಟ ಮಾಡಿದರು.ಕನ್ನಡ ನಾಡು-ನುಡಿ, ನೆಲ-ಜಲದ ಪ್ರಶ್ನೆ ಎದುರಾದಾಗಲೆಲ್ಲ ಬೀದಿಗಿಳಿದು ಹೋರಾಡಿದರು. ರೈತರ ಸಮಸ್ಯೆಗಳಿಗೆ, ರೈತ-ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶ್ರೀಗಳು ಎಲ್ಲ ಕಾಲಕ್ಕೆ ಕನ್ನಡದ ಘನತೆಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಕರ್ನಾಟಕ ಸರಕಾರ 1995 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಪುಸ್ತಕದ_ಸ್ವಾಮೀಜಿ ಎಂದು ಜನ ಅಭಿಮಾನ ಹಾಗೂ ಗೌರವದಿಂದ ಸಂಭೋದಿಸುತ್ತಾರೆ. ಅನ್ನದಾಸೋಹ, ಜ್ಞಾನ ದಾಸೋಹಗಳೊಂದಿಗೆ ಪುಸ್ತಕದ ದಾಸೋಹವು ನಿರಂತರವಾಗಿ ನಡೆದಿದೆ. ಈ ಕಾರ್ಯ ವಿಶ್ವವಿದ್ಯಾಲಯ ಪ್ರಸಾರಾಂಗದ ಕಾರ್ಯಕ್ಕೆ ಸಮಾನವಾಗಿದೆ. ಒಂದು ವಿಶ್ವವಿದ್ಯಾಲಯಕ್ಕಿಂತಲೂ ಮಿಗಿಲಾದ ಶಿಸ್ತಿನಿಂದ ಅಕಾಡೆಮಿಕ್ ರೀತಿಯಲ್ಲಿ ಬಸವಾದಿ ಶರಣರ ವಚನ ಸಾಹಿತ್ಯ ಪ್ರಕಟನೆ ಒಳಗೊಂಡಂತೆ 500ಕ್ಕಿಂತ ಅಧಿಕ ಪುಸ್ತಕಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಶ್ರೀಮಠದ ಮೂಲಕ ಪ್ರಕಟಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಬಂದ ಭಕ್ತರ ಕೈಗೆ ಕಲ್ಲು ಸಕ್ಕರೆಯ ಜತೆಗೆ ಕನ್ನಡ ಪುಸ್ತಕಗಳನ್ನು ಅಶೀರ್ವದಿಸಿ ಭಕ್ತರ ಅರಿವಿನ ವಿಸ್ತಾರಕ್ಕೆ ಕಾರಣರಾದರು. ಕನ್ನಡ ಪುಸ್ತಕ ಪ್ರಾಧಿಕಾರ ಮಠದ ಅಧ್ಯಯನ ಸಂಸ್ಥೆಯ ಈ ಕಾರ್ಯವೈಖರಿ ಗುರುತಿಸಿ 2010ನೇ ಸಾಲಿನ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿತು.

ನ್ಯಾಯ_ನಿಷ್ಠುರತೆ : ನ್ಯಾಯ ನಿಷ್ಠುರತೆ, ನಿರ್ಭಿತ ವ್ಯಕ್ತಿತ್ವ, ನಿರಾಡಂಬರ ಜೀವನ ಕ್ರಮ, ಪ್ರಗತಿಪರ ವಿಚಾರಧಾರೆ, ಸಾಮಾಜಿಕ ನ್ಯಾಯದ ಪರಿಪಾಲನೆ ಇವರನ್ನು ಇತರರಿಗಿಂತ ಭಿನ್ನವಾಗಿಸಿವೆ. ವಿಚಾರ ಪ್ರಣೀತ ಪರಿಣಾಮಕಾರಿ ಮಾತುಗಾರಿಕೆ ಇವರ ಮೇರು ವ್ಯಕ್ತಿತ್ವದ ಇನ್ನೊಂದು ಪ್ರಧಾನಗುಣ.

ಕಂದಾಚಾರಗಳ_ವಿರುದ್ಧ_ಹೋರಾಟ : ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ನಿರಂತರವಾಗಿ ದ್ವನಿಯೆತ್ತಿರುವ ಪೂಜ್ಯರು ಬಸವಾದಿ ಪ್ರಥಮರ ಸಹಜ ವೈಚಾರಿಕ ನೆಲೆಯಲ್ಲಿ ಜನರ ಬದುಕು ಕಟ್ಟುತ್ತಿರುವರು. ಶ್ರೀಗಳ ಸ್ಪೂರ್ತಿದಾಯಕ ವಾಣಿಯ ಪ್ರಭಾವಕ್ಕೊಳಗಾದ ಸಹಸ್ರಾರು ಸಂಖ್ಯೆಯ ಭಕ್ತರು ಮೂಢನಂಬಿಕೆ ಕಂದಾಚಾರಗಳಿಗೆ ತಿಲಾಂಜಲಿ ಇತ್ತಿರುವರು. ಮೂಢನಂಬಿಕೆಗಳಿಗೆ ಹೆಸರಾಗಿದ್ದ ತಮ್ಮ ಮಠದ ಜಾತ್ರೆಗಳನ್ನು ಜನತಾ ವಿಶ್ವವಿದ್ಯಾಲಯಗಳನ್ನಾಗಿ ಮಾಡಿದ್ದಾರೆ.

ಶಿಕ್ಷಣ_ಪ್ರಸಾರ : ಬಾಲವಾಡಿಯಿಂದ ಸ್ನಾತಕೋತ್ತರ ಪದವಿವರೆಗೆ ಶ್ರೀಗಳು 80 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ವಿಶೇಷವಾಗಿ 15 ಐಟಿಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸುವ ಮೂಲಕ ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ. ಇಂದು ಈ ಸಂಸ್ಥೆಗಳಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಸೇವೆಯಲ್ಲಿದ್ದಾರೆ. ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಪ್ರಸಾರ ಮತ್ತು ಸಮಾಜಸೇವೆಗಾಗಿ 1994 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ಪ್ರದಾನ ಮಾಡಿದೆ.

ಭೂದಾನ : ಯಾದಗಿರಿ, ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಂತೆ ಹಿಂದುಳಿದ ಪ್ರದೇಶಗಳಲ್ಲಿ ಅನೇಕ ಸರಕಾರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ, ಸರಕಾರಿ ಪದವಿ ಕಾಲೇಜು, ಸರಕಾರಿ ಆಸ್ಪತ್ರೆ ಅಂಗನವಾಡಿ, ಕೃಷಿಕೇಂದ್ರ, ಪಶು ಚಿಕಿತ್ಸಾಲಯ, ಸರಕಾರಿ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ, ಹಿಂದುಳಿದ, ಅಲ್ಪಸಂಖ್ಯಾತರ ಹಾಸ್ಟೇಲ್ಗಳನ್ನು ಸ್ಥಾಪಿಸಲು ಸರಕಾರಕ್ಕೆ ತಮ್ಮ ಮಠದ ಕೋಟ್ಯಂತರ ರೂ ಬೆಲೆಬಾಳುವ ಜಮೀನುಗಳನ್ನು ದಾನ ಮಾಡಿದ್ದಾರೆ. ಮಠ-ಮಂದಿರಗಳನ್ನು, ಮಸೀದಿಗಳನ್ನು ಸ್ಥಾಪಿಸಲು ತಮ್ಮ ಜಮೀನುಗಳನ್ನು ದಾನ ಮಾಡಿದ್ದಾರೆ. ಶ್ರೀಗಳು ತಮ್ಮ ಮಠಕ್ಕೆ ಪರಂಪರಾಗತ ಬಂದಿದ್ದ 3000 ಎಕರೆ ಭೂಮಿಯನ್ನು ಭೂಸುಧಾರಣೆ ಕಾಯ್ದೆ ಬಳಸಿಕೊಂಡು ನಿಸ್ವಾರ್ಥ ಭಾವದಿಂದ ರೈತರಿಗೆ ಸದ್ದಿಲ್ಲದೆ ಭೂಮಿ ಹಂಚಿಕೆ ಮಾಡಿ ಭೂದಾನ ಚಳುವಳಿಗೆ ಬೆಂಬಲ ನೀಡಿದ್ದಾರೆ.

ಕೋಮು_ಸೌಹಾರ್ದತೆ_ಹರಿಕಾರರು : ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆದ ಪೂಜ್ಯರು ವಿವಿಧ ಕೋಮುಗಳ ಮಧ್ಯ ಸೌಹಾರ್ದತೆ ತರುವ ಸಲುವಾಗಿ ಅಹೋರಾತ್ರಿ ಪರಿಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರ, ಶ್ರೀಗಳಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು, ಪ್ರದಾನಮಂತ್ರಿ ಸಮ್ಮುಖದಲ್ಲಿ 2001ನೇ ಸಾಲಿನ ಕೋಮುಸೌಹಾರ್ದತಾ ಹಾಗೂ ದೇಶದ ಏಕತಾ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಚರ್ಚೆ : ಹಲವು ವಿಚಾರಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು ವಿವಿಧ ಚರ್ಚಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಸಾಹಿತಿ ಎಂ.ಎಂ.ಕಲಬುರಗಿ ಅವರ ವಿದ್ಯಾರ್ಥಿಯಾಗಿದ್ದ ಸಿದ್ದಲಿಂಗ ಸ್ವಾಮೀಜಿ ಗುರು ಶಿಷ್ಯರಿಬ್ಬರು ಸಹ ವಿಜಯಪುರ ಜಿಲ್ಲೆ ಸಿಂಧಗಿ ಮೂಲದವರು.

ಸಾಮಾನ್ಯರ_ಸ್ವಾಮೀಜಿ : ಸ್ವಾಮಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಭಕ್ತರು ಹೊರುವದು ಅಮಾನುಷ ಎಂದು 1976 ರಲ್ಲಿ ಅಡ್ಡಪಲ್ಲಕ್ಕಿಯನ್ನು ಮತ್ತು ಹಿಂದಿನ ಕಾಲದಲ್ಲಿ ರಾಜಮಹಾರಾಜರು ನೀಡಿದ್ದ ಬಂಗಾರದ ಕೀರಿಟ, ಬಂಗಾರದ ಆಭರಣಗಳನ್ನು ಶ್ರೀಗಳು ತ್ಯಜಿಸಿದರು. ಅಡ್ಡಪಲ್ಲಕ್ಕಿಯಲ್ಲಿ ಶರಣರ ವಚನಗಳ ಕಟ್ಟುಗಳನ್ನು, ಶರಣರ ಭಾವಚಿತ್ರಗಳನ್ನಿಟ್ಟು ಅದರ ಮುಂದೆ ಪಾದಚಾರಿಗಳಾಗಿ ಉತ್ಸವಗಳಲ್ಲಿ ಭಾಗವಹಿಸುವುದು ಅವರ ಸರಳತೆಗೆ ಸಾಕ್ಷಿಯಾಗಿದೆ. ಶ್ರೀಗಳು ತಮ್ಮ ಸಂಸ್ಥಾನಮಠವನ್ನೇ ಬಸವತತ್ವದ ಮಠವನ್ನಾಗಿ ಪರಿವರ್ತಿಸಿದ್ದಾರೆ.

ಬಸವತತ್ವದ_ಅಗ್ರ_ಪ್ರತಿಪಾದಕರು: ಬಸವತತ್ವವನ್ನು ದೇಶ-ವಿದೇಶಗಳಲ್ಲಿ ಪ್ರಚಾರ ಮಾಡಿದ್ದಾರೆ. ಬಸವ ಸಿದ್ಧಾಂತ-ಪರಂಪರೆ ಪ್ರತಿನಿಧಿಗಳಾಗಿ ಬಸವಣ್ಣನಿಗೆ ಅರ್ಪಿಸಿಕೊಂಡವರಾಗಿ ಜನಮಾನಸದಲ್ಲಿ ಸಾಮಾನ್ಯರ ಸ್ವಾಮೀಜಿ ಎಂದೇ ನೆಲೆ ಪಡೆದಿದ್ದಾರೆ.

ಕರ್ನಾಟಕದ_ಗಾಂಧಿಯ_ಸ್ಮಾರಕ : ಕರ್ನಾಟಕದ ಗಾಂಧಿ, ಅಪ್ರತಿಮ ದೇಶಭಕ್ತ, ಶ್ರೇಷ್ಠ ಸಮಾಜ ಸುಧಾರಕ, ಸ್ವಾತಂತ್ರ ಸೇನಾನಿ ಹರ್ಡೇಕರ ಮಂಜಪ್ಪನವರು ಮಹಾತ್ಮಾ ಗಾಂಧೀಜಿ ಸಲಹೆಯಂತೆ ಆಲಮಟ್ಟಿಯಲ್ಲಿ 1929 ರಲ್ಲಿ ಆಶ್ರಮ ಸ್ಥಾಪಿಸಿದ್ದರು. ಗಾಂಧಿವಾದಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಆ ಸಂಸ್ಥೆಯನ್ನು ಶ್ರೀಗಳಿಗೆ ಅರ್ಪಿಸಿದ ನಂತರ ಶ್ರೀಗಳು ಮಂಜಪ್ಪನವರ ಸಮಾಧಿ ಸ್ಥಳಾಂತರಿಸಿ ಸರಕಾರದ ಹಾಗೂ ಸಂಸ್ಥೆಯ ನೆರವಿನಿಂದ ಬೃಹತ್ ಸ್ಮಾರಕ ಭವನ ನಿರ್ಮಿಸಿದ್ದಾರೆ.

ಪೋಸ್ಕೋ_ಚಳುವಳಿ : ಉತ್ತರಕರ್ನಾಟಕ ಪಶ್ಚಿಮ ಘಟ್ಟ ಎಂದೇ ಕರೆಯಲ್ಪಡುವ ಕಪ್ಪತ್ತಗುಡ್ಡದ ಪರಿಸರದಲ್ಲಿ ಬರುವ ಡಂಬಳ ಮೊದಲಾದ ಊರುಗಳ 6000 ಎಕರೆ ಭೂಮಿ ವಶಪಡಿಸಿಕೊಂಡು ದಕ್ಷಿಣ ಕೋರಿಯಾ ಮೂಲದ ದೈತ್ಯ ಪೋಸ್ಕೋ ಕಂಪನಿ ಉಕ್ಕಿನ ಕೈಗಾರಿಕಾ ತೆರೆಯಲು ಮುಂದಾಗಿತ್ತು. ಕಬ್ಬಿಣದ ಅದಿರಿಗಾಗಿ ಕಪ್ಪತ್ತಗುಡ್ಡವನ್ನು ಆಶ್ರಯಿಸಿದ್ದ ಈ ಕಂಪನಿಯ ದುರುದ್ದೇಶ ತಿಳಿದ ಶ್ರೀಗಳು ಈ ಕೈಗಾರಿಕೆ ವಿರುದ್ಧ ಬೃಹತ್ ಚಳುವಳಿ ನಡೆಸಿದರು. ಶ್ರೀಗಳ ಹೋರಾಟದಲ್ಲಿ ನಾಡಿನ ಎಲ್ಲ ಜನಾಂಗದ ಮಠಾಧೀಶರು, ಪರಿಸರವಾದಿಗಳು, ಪತ್ರಕರ್ತರು, ಪರಿಸರವಾದಿ ಮೇಧಾ ಪಾಟ್ಕರ್ ಅಲ್ಲದೆ ಅನೇಕ ರಾಜಕೀಯ ಮುಖಂಡರು ಭಾಗವಹಿಸಿದರು. ಶ್ರೀಗಳ ಹೋರಾಟದ ಬಗ್ಗೆ ಭಯಗೊಂಡ ಸರಕಾರ ಶ್ರೀಗಳಿಗೆ ಕೈಗಾರಿಕಾ ಸ್ಥಾಪಿಸುವುದಿಲ್ಲ ಎಂದು ಪತ್ರ ನೀಡಿ ಪರಿಸರ ವಿರೋಧಿ ಈ ಕೈಗಾರಿಕಾ ಸ್ಥಾಪಿಸುವುದನ್ನು ಕೈಬಿಟ್ಟಿತು. ಇಂತಹ ಹೋರಾಟ ದೇಶದಲ್ಲಿ ಯಶಸ್ವಿಯಾಗಿರುವದು ಅತಿ ವಿರಳ. ಇದೇ ಕಂಪನಿ ವಿರೋಧದ ಮಧ್ಯದಲ್ಲಿ ಓಡಿಸ್ಸಾದಲ್ಲಿ ಸ್ಥಾಪನೆಯಾಗಿದೆ.

ಭ್ರಷ್ಟಾಚಾರ_ವಿರೋಧಿ_ಹೋರಾಟ : ಶ್ರೀಗಳು ಅಣ್ಣಾ ಹಜಾರೆಯವರು ಹೋರಾಟಕ್ಕೆ ಉತ್ತರ ಕರ್ನಾಟಕದಲ್ಲಿ ಬೆಂಬಲ ನೀಡಿದ್ದರಿಂದ ಈ ಹೋರಾಟಕ್ಕೆ ಸ್ವತಃ ಅಣ್ಣಾ ಹಜಾರೆ ಗದುಗಿನ ಮಠಕ್ಕೆ ಬಂದು ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.

116 ಅಡಿ ಎತ್ತರ ಬಸವೇಶ್ವರ_ಮೂರ್ತಿ ಸ್ಥಾಪನೆಗೆ ಪ್ರೇರಣೆ : ಶ್ರೀಗಳು ಈಗಾಗಲೇ ಜಮಖಂಡಿ, ಕುಷ್ಟಗಿ, ಗದಗ ಮುಂತಾದ ಕಡೆ ಬಸವಣ್ಣನವರ ಮೂರ್ತಿಸ್ಥಾಪನೆಗೆ ದೇಣಿಗೆ ನೀಡಿದ್ದಾರೆ. ಗದಗದಲ್ಲಿ ಮೂರ್ತಿ ಸ್ಥಾಪನೆಗೆ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೆ ಗದಗ ನಗರದ ಭೀಷ್ಮಕೆರೆಯಲ್ಲಿ ಅಂದಿನ ಸಚಿವ ಶ್ರೀರಾಮುಲು ಮೇಲೆ ಪ್ರಭಾವ ಬೀರಿ 116 ಅಡಿ ಎತ್ತರದ ಬೃಹತ್ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಕಾರಣವಾಗಿದ್ದಾರೆ. ಇದು ಆಧುನಿಕ ದಿನಮಾನದ ಒಂದು ಭವ್ಯ ವಾಸ್ತುಶಿಲ್ಪ ಎನಿಸಿದೆ.

ಲಿಂಗೈಕ್ಯ : ಶಿಕ್ಷಣ ,ಆರೋಗ್ಯ ಸೇರಿದಂತೆ ಐದು ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿಯವರು ದಿನಾಂಕ ೨೦ ಆಕ್ಟೊಬರ ೨೦೧೮ ರಂದು (ವಯಸ್ಸು: 76) ಲಿಂಗೈಕ್ಯರಾದರು

Leave a Reply

Your email address will not be published. Required fields are marked *