ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚನೆ ವಿರೋಧಿಸಿ ಎಸ್.ಎಫ್.ಐ ಮನವಿ
ವೀರಮಾರ್ಗ ನ್ಯೂಸ್ ಹಾವೇರಿ : ದೇವಗಿರಿ ಗ್ರಾಮದ ಜಿಲ್ಲಾಧಿಕಾರಿ ಎದುರು ವಸತಿ ನಿಲಯ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳ ಪರಿಹಾರಕ್ಕಾಗಿ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿ, ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಜಿಲ್ಲಾ ಅಧಿಕಾರಿ ವಿ.ಎಸ್.ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿರುವ ಬಿಸಿಎಮ್ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಆಹಾರದ ವ್ಯವಸ್ಥೆ ಮಾಡುವುದಿಲ್ಲ, ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚನೆ ಮಾಡುತ್ತಿರುವುದು ಸರಿಯಲ್ಲ ಖಂಡನೀಯ ವಿಚಾರವಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಆಶ್ರಯವಾಗಿರುವ ಈ ವಸತಿ ನಿಲಯದಲ್ಲಿ ಸರ್ಕಾರ ನೀಡುವ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಮೇನ್ ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ, ಸೌಲಭ್ಯಗಳು ಸಿಗುತ್ತಿಲ್ಲವೆಂದು ವಿದ್ಯಾರ್ಥಿಗಳು ಅಳಲು ಹೇಳಿಕೊಂಡರು.
ಸರಿಯಾದ ಸಮಯಕ್ಕೆ ಸರಿಯಾದ ಊಟದ ವ್ಯವಸ್ಥೆ ಮಾಡುತ್ತಿಲ್ಲ ಗುಣಮಟ್ಟದ ಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ಹಾಗೂ ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಸರ್ಕಾರದ ಆಯುಕ್ತರ ಆದೇಶದ ಪ್ರಕಾರ ನೀಡಬೇಕೆಂದು ವಾರ್ಡನ್ ಹೇಳಿದ್ದಾರೆ. ಆದರೆ ಸರ್ಕಾರಿ ಅಡುಗೆ ಸಿಬ್ಬಂದಿಗಳು ಜಿಲ್ಲೆಯ ಊಟದ ಮೆನ್ ಬದಲಾವಣೆ ಇದೆ ರೊಟ್ಟಿ, ಚಪಾತಿ, ಪೂರಿ, ಇಡ್ಲಿ ಸೇರಿದಂತೆ ಇತರೆ ನಾವು ಅಡುಗೆ ಮಾಡುವುದಿಲ್ಲ ಎಂದು ವಾಗ್ದಾನ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಅನೇಕ ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಹಾಸ್ಟೆಲ್ ಗಳಿಗೆ ಕರೆಂಟ್ ಇಲ್ಲದ ಸಮಯದಲ್ಲಿ ಯುಪಿಎಸ್ ಅಳವಡಿಕೆ, ಉಚಿತ ವೈಫೈ, ಹೊಸ ಕಾಟ್ ಬೇಡ್, ತಟ್ಟೆ, ಉಪಕರಣಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ ಎಂದು ಕೇವಲ ಭರವಸೆ ನೀಡುತ್ತಾರೆ. ಆಶ್ವಾಸನೆ ಬೇಡ ಸೌಲಭ್ಯ ಬೇಕು. ಸರ್ಕಾರಿ ಅಡುಗೆ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಕೂಡಲೆ ಹಾಸ್ಟೆಲ್ ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು. ವಸತಿ ನಿಲಯದಲ್ಲಿನ ಕೆಲ ಸಮಸ್ಯೆಗಳ ಜೊತೆಗೆ ಸೂಕ್ತ ಆಹಾರದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ಕೂಡಲೇ ಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ. ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿ ಆಹಾರದ ಮೆನ್ ಚಾರ್ಟ್ ಬದಲಾವಣೆ ಮಾಡಿ ಬಾರಿ ದೊಡ್ಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪ್ರತಿ ವಸತಿ ನಿಲಯಗಳಲ್ಲೂ ಆಯುಕ್ತರ ಆದೇಶದ ಪ್ರಕಾರ ಊಟದ ಮೆನ್ ಅಳವಡಿಸಬೇಕು. ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ದೂರ ನೀಡಲಾಗುವುದು ಎಂದು ಆಗ್ರಹಿಸಿದರು.
ಉತ್ತಮ ಗುಣಮಟ್ಟದ ಆಹಾರ ಸೇರಿದಂತೆ ವಿದ್ಯಾರ್ಥಿನಿಯರ ನ್ಯಾಯಯುತ ಎಲ್ಲಾ ಬೇಡಿಕೆಗಳನ್ನು ಒಂದು ವಾರದ ಒಳಗೆ ಈಡೇರಿಸಲು ಅಧಿಕಾರಿಗಳು ಮುಂದಾಗಬೇಕು ಒಂದು ವೇಳೆ ನಿರ್ಲಕ್ಷಿಸಿದರೆ ಹಾಸ್ಟೆಲ್ ಎದುರು ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನಿಲ್ ಕುಮಾರ್ ಎಲ್, ಪ್ರಶಾಂತ್ ಎಚ್, ಗುಡ್ಡಪ್ಪ ಎನ್ ಜಿ, ಪ್ರವೀಣ ಕೆ, ಕೃಷ್ಣ ಎಸ್, ಬಸವನಗೌಡ ಕೆ, ಮಧುಸೂದನ್ ಎಮ್ ಸಿದ್ದಲಿಂಗೇಶ ಆರ್, ಕಲ್ಲನಗೌಡ ಡಿ, ವಿನಯ್ ಹೆಚ್,ರವಿ ಆರ್ ಡಿ, ಸಚಿನ್ ಎಲ್ ಸಿ, ಅಭಿಷೇಕ್ ಎಸ್ ಡಿ, ಸಂದೀಪ್ ಎ ಕೆ, ಸುನೀಲಗೌಡ್ರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.