ವೀರಮಾರ್ಗ ನ್ಯೂಸ್ ಮುಂಡರಗಿ : ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸತ್ಫಲಗಳನ್ನು ಪಡೆದುಕೊಳ್ಳಬೇಕು. ಶಾಂತಿ ನೆಮ್ಮದಿಯ ಬದುಕಿಗೆ ಮತ್ತು ಬದುಕು ಬಲಗೊಳ್ಳಲು ಆಧ್ಯಾತ್ಮಿಕ ಚಿಂತನಗಳು ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ನೀತಿ ನಿಯತ್ತುಗಳಿಲ್ಲದೆ ಮನುಷ್ಯನ ಬದುಕು ತತ್ತರಿಸುತ್ತಿದೆ. ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗುವುದಿಲ್ಲ. ವ್ಯಕ್ತಿ ಸಂಪತ್ತು ಸಂಪಾದಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಬೆಳೆಸಿಕೊಂಡು ಬಾಳುವುದನ್ನು ಕಲಿಯಬೇಕು. ಯುವ ಜನಾಂಗ ಈ ರಾಷ್ಟ್ರದ ಅಮೂಲ್ಯ ಸಂಪತ್ತು ಮತ್ತು ಆಸ್ತಿ. ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಬೆಳಕು ಮೂಡಿಸಬೇಕೇ ಹೊರನು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಮನುಷ್ಯ ಬದುಕಿ ಬಾಳಲು ಭಗವಂತ ನೆಲ ಜಲ ಅನ್ನ ಗಾಳಿ ಬೆಳಕು ಕೊಟ್ಟವನು. ಅಮೂಲ್ಯ ಸಂಪನ್ಮೂಲಗಳನ್ನು ಕೊಟ್ಟ ಭಗವಂತನಿಗೆ ಒಂದಿಷ್ಟಾದರೂ ಕೃತಜ್ಞತೆ ಸಲ್ಲಿಸದಿದ್ದರೆ ಮಾನವ ಜೀವನ ಸಾರ್ಥಕಗೊಳ್ಳದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಕಲಕೇರಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಧರ್ಮ ಸಂಸ್ಕೃತಿ ಆದರ್ಶಗಳನ್ನು ಅನುಸರಿಸಿ ಬಾಳುತ್ತಿರುವ ಮಾಜಿ ಸಚಿವ ಎಸ್.ಎಸ್.ಪಾಟೀಲ ಮತ್ತು ಅವರ ಚಿರಂಜೀವಿ ಶಿವಕುಮಾರಗೌಡ ಪಾಟೀಲರ ಈ ಸತ್ಕಾರ್ಯ ನಾಡಿನ ಜನರ ಮನದಲ್ಲಿ ಅಚ್ಚಳಿಯದ ಪ್ರಭಾವ ಬೀರುವುದೆಂದು ಹರುಷ ವ್ಯಕ್ತ ಪಡಿಸಿದರು.

ಸಮಾರಂಭ ಉದ್ಘಾಟಿಸಿದ ಕ.ಸಾ.ಪ.ಮಾಜಿ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ಚಿತೆ ನಿರ್ಜೀವ ವಸ್ತುಗಳನ್ನು ಸುಡುತ್ತದೆ. ಚಿಂತೆ ಸಜೀವ ವಸ್ತುಗಳನ್ನು ನಾಶಗೊಳಿಸುತ್ತದೆ. ಚಿಂತೆ ಚಿಂತನೆಗೊಳಗಾದಾಗ ಬದುಕು ಸಾರ್ಥಕಗೊಳ್ಳುತ್ತದೆ. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಣ್ಣನವರು ಸಮಾಜದ ಎರಡು ಕಣ್ಣು. ಸತ್ಯದ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕೆಂಬ ಸದುದ್ದೇಶದಿಂದ ಪಂಚ ಪೀಠಗಳಲ್ಲಿ ಅಗ್ರ ಪೀಠವಾದ ಶ್ರೀ ಜಗದ್ಗುರು ರಂಭಾಪುರಿ ಪೀಠ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಬೋಧಿಸಿದೆ. ಪ್ರಸ್ತುತ ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಸಂಚರಿಸಿ ಭಕ್ತರಲ್ಲಿ ಜಾಗೃತಿ ಉಂಟು ಮಾಡುತ್ತಿರುವುದನ್ನು ಮರೆಯಲಾಗದೆಂದರು. ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಮಾಡುವುದೇ ಶ್ರೀ ರಂಭಾಪುರಿ ಪೀಠದ ಗುರಿ. ಅಧರ್ಮದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯುವುದಿಲ್ಲ. ಸತ್ಯ ಧರ್ಮ ಉಳಿಯಬೇಕು ಮತ್ತು ಬೆಳೆಯಬೇಕೆಂದರು.
ಸಮ್ಮುಖ ವಹಿಸಿದ ವಿರೂಪಾಪುರ ಕಲಕೇರಿ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿಗೆ ಕಾರಣವೆಂದರೆ ತಪ್ಪಾಗದು. ಬದುಕಿನ ಬೆಂಗಾಡು ಸಮೃದ್ಧಗೊಳ್ಳಲು ಗುರು ಮತ್ತು ದೇವರ ಕೃಪೆ ಅವಶ್ಯಕವೆಂದರು. ನುಡಿ ನೈವೇದ್ಯ ಸಲ್ಲಿಸಿದ ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಕಲಕೇರಿ ಗ್ರಾಮದ ಇತಿಹಾಸದಲ್ಲಿಯೇ ಅವಿಸ್ಮರಣೀಯ ಸಮಾರಂಭವಿದು. ಬಹಳ ವರುಷಗಳ ಕನಸು ನನಸಾದ ದಿನ. ಗುರಿಯಿಲ್ಲದ ಗುರು ಇಲ್ಲದ ಜೀವನ ನಿರರ್ಥಕ. ಶಿವನ ಸಾಕಾರ ರೂಪವೇ ಶ್ರೀ ಗುರು. ಗುರುವಿನ ದರ್ಶನವಾದರೆ ಶಿವನ ದರ್ಶನವಾದಂತೆ ಎಂದರು.
ಈ ಪವಿತ್ರ ಸಮಾರಂಭದಲ್ಲಿ ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯರು, ಸೂಡಿ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಸಿದ್ಧರಬೆಟ್ಟ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯರು, ಮಾನೆಹಳ್ಳಿ ಮಳಿಯೋಗೇಶ್ವರ ಶಿವಾಚಾರ್ಯರು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು ಮತ್ತು ರಾಜಕೀಯ ಧುರೀಣರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ ಸತ್ಯ ಮನುಷ್ಯನನ್ನು ಬದಲಿಸುತ್ತದೆ. ನಮ್ಮ ನಡೆ ನುಡಿಗಳು ಸತ್ಯದ ಪರವಾಗಿರಬೇಕು. ವಾದ ವಿವಾದಗಳನ್ನು ಬಿಟ್ಟರೆ ಸಂಬಂಧ ಹೆಚ್ಚು ಬೆಳೆಯುತ್ತವೆ. ಶಿವಪಥವನರಿವೊಡೆ ಗುರುಪಥವೇ ಮೊದಲು ಎಂದು ಶರಣರು ಸಾರಿದ್ದಾರೆ. ಶ್ರೀ ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲೆಂದರು. ನ್ಯಾಯವಾದಿಗಳಾದ ವೀರೇಶ ಕೂಗು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಸಮ್ಮುಖವನ್ನು ವಿರುಪಾಪುರ ಕಲಕೇರಿ ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಶಿವಕುಮಾರಗೌಡ ಎಸ್.ಪಾಟೀಲ ಸ್ವಾಗತಿಸಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಕಲಕೇರಿ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಡೊಳ್ಳು ವೀರಗಾಸೆ ಕಲಾತಂಡ, ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು ಉತ್ಸವಕ್ಕೆ ಮೆರಗು ತಂದರು.