ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ : ಶಾಸಕ ಮಾನೆ
ವೀರಮಾರ್ಗ ನ್ಯೂಸ್ ಹಾನಗಲ್ : ವ್ಯವಸ್ಥೆ ಬದಲಾಗಬೇಕಾದರೆ ನಾವೂ ಸಹ ಬದಲಾವಣೆಯ ಭಾಗವಾಗಬೇಕು. ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಹಾವಣಗಿ ಗ್ರಾಮದಲ್ಲಿ ಇಲ್ಲಿನ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ, ಜಾತಿಗಳ ಹೆಸರಿನಲ್ಲಿ ಬಡಿದಾಡುವುದು ಈ ನೆಲದ ಸಂಸ್ಕೃತಿ ಅಲ್ಲ. ಸಾಮರಸ್ಯ, ಸೌಹಾರ್ದತೆಯಿಂದ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹೋದರರಂತೆ ಪ್ರತಿಯೊಬ್ಬರೂ ಸಹ ಬದುಕು ಸಾಗಿಸುವುದು ಈ ನೆಲದ ಸಂಸ್ಕೃತಿ ಎನ್ನುವ ಕುರಿತು ವಿದ್ಯಾರ್ಥಿ ದೆಸೆಯಿಂದಲೇ ತಿಳಿವಳಿಕೆ ಮೂಡಿಸಬೇಕಿದೆ. ಸಾಮಾಜಿಕ ಜವಾಬ್ದಾರಿ, ಕರ್ತವ್ಯಗಳನ್ನು ಮರೆಯುತ್ತಿರುವ ಪರಿಣಾಮ ಸಂಕಷ್ಟಗಳು ಹೆಚ್ಚುತ್ತಿವೆ. ಸರ್ಕಾರದ ಮೇಲೂ ಸಹ ಹೊರೆ ಬೀಳುತ್ತಿದೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುವ ಮನೋಭಾವನೆ ಸರಿಯಲ್ಲ. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಸಮುದಾಯದಲ್ಲಿ ಅರಿವು ಮೂಡಿಸಬೇಕಿದೆ. ಗಾಂಧೀಜಿ ಅವರ ಸರ್ವೋದಯ ತತ್ವದ ನೆಲೆಯಲ್ಲಿ ಯೋಚಿಸಿ ರಾಷ್ಟ್ರೀಯ ಸೇವಾ ಯೋಜನೆ ಆರಂಭಿಸಲಾಗಿದೆ. ಲೋಕಸೇವೆಯ ಮೂಲಕ ವಿದ್ಯಾರ್ಥಿಗಳನ್ನು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸುವುದೇ ಇದರ ಮೂಲ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ವೀರೇಶ ಕುಮ್ಮೂರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ ಮೌಢ್ಯ, ಕಂದಾಚಾರಗಳನ್ನು ಕಾಣುತ್ತಿದ್ದೇವೆ. ಇವುಗಳ ವಿರುದ್ಧ ಶಿಬಿರಾರ್ಥಿಗಳು ಜಾಗೃತಿ ಮೂಡಿಸಬೇಕಿದೆ. ರಚನಾತ್ಮಕ ಕಾರ್ಯಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.

ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಿಲ್ಪಾ ಪದ್ಮೋಜಿ, ಮಾಜಿ ಅಧ್ಯಕ್ಷ ಆನಂದ ಹವಳಣ್ಣನವರ, ಮಲ್ಲನಗೌಡ ಕುಲಕರ್ಣಿ, ಯಮುನಾ ಕೋಣೇಸರ, ಪಾಂಡುರಂಗ ಕೊಂಡೂರ, ಪ್ರೇಮಾ ವೀರಾಪುರ, ಗೀತಾ, ನೂರ್ಅಹ್ಮದ್ ತಿಳವಳ್ಳಿ, ಲೀಲಾವತಿ ಸಂಗೂರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.