ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಿ
ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರಿಂದ ತಹಶೀಲ್ದಾರರಗೆ ಮನವಿ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಹಂಗನಕಟ್ಟಿ ಮಾತನಾಡಿ ರಿಕ್ಕಿ ರೈ ಮೇಲೆ ಮಧ್ಯರಾತ್ರಿ ದು?ರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಬಿಡದಿಯ ಮುತ್ತಪ್ಪ ರೈ ಅವರ ನಿವಾಸದ ಮುಂದೆಯೇ ಜರುಗಿದೆ. ರಿಕ್ಕಿ ರೈ ವಿಶೇಷವಾಗಿ ತಾವೇ ಕಾರನ್ನು ಚಲಾಯಿಸುತ್ತಿರುವುದನ್ನು ಅರಿತಿದ್ದ ದುಷ್ಕರ್ಮಿಗಳು ಡ್ರೈವಿಂಗ್ ಸೀಟನ್ನೇ ಗುರಿಯಾಗಿಸಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದರು. ಆದರೆ ಅವರು ಮುಂದೆ ಬಾಗಿದ ಪರಿಣಾಮ ಗುಂಡೇಟಿನಿಂದ ಪಾರಾಗಿದ್ದಾರೆ. ಆದರೆ ಪಕ್ಕದ ಸೀಟಿನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಭಯ ಆವರಿಸಿದೆ. ಕಾರಣ ಗುಂಡಿನ ದಾಳಿ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಹೇಳಿದರು.
ಸಂಘಟನೆಯ ಗೌರವಾಧ್ಯಕ್ಷ ಇಸಾಕ್ಭಾಷಾ ಹರಪನಹಳ್ಳಿ ಮಾತನಾಡಿ ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಖಂಡನೀಯ. ಸರ್ಕಾರ ಅವರಿಗೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ ದಾಳಿ ಮಾಡಿದವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಮೇಲ್ಮುರಿ, ಇರ್ಫಾನ್ ಹರಪನಹಳ್ಳಿ, ಬಸವರಾಜ ಮೂಕಿ, ಪರಶುರಾಮ ಕಿಳ್ಳೆಕ್ಯಾತರ, ಮಹಮ್ಮದ್ಯುಸೂಪ್ ಕೊರಗೇರಿ, ಮಾಳಪ್ಪ ಹರಿಜನ, ಸೋಮಣ್ಣ ಮೇಲ್ಮುರಿ ಸೇರಿದಂತೆ ಮತ್ತಿತರರು ಇದ್ದರು. ಗ್ರೇಡ್-೨ ತಹಶೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು.
ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಿ
