ಕುಣಿಗಲ್ ತಾಲೂಕಾದ್ಯಂತ KRS ಪಕ್ಷದ ರೈತ ಚೈತನ್ಯ ಯಾತ್ರೆ
ವೀರಮಾರ್ಗ ನ್ಯೂಸ್ : ಕುಣಿಗಲ್ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ರೈತ ಘಟಕದ ವತಿಯಿಂದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ
ರೈತರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ “ರೈತ ಚೈತನ್ಯ ಯಾತ್ರೆ” ಯಶಸ್ವಿಯಾಗಿ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳಾದ ಎಲಿಯೂರು,ಕೆಂಪನಹಳ್ಳಿ, ಸಂತೆಪೇಟೆ,ಎಳಗಳವಾಡಿ,ಹುಲಿಯೂರು ದುರ್ಗಾ,ಸಂತೆ ಮಾತುರ್ ಗ್ರಾಮಗಳಲ್ಲಿ ಅಭಿಯಾನ ನಡೆಸಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಾಯಿತು.
ಈ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷರಾದ ರಘು ಜಾಣಗೆರೆ ಅವರು ರೈತರ ಸಂಕಷ್ಟಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು,ರೈತರ ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ,ನೀರಾವರಿ ಸೌಲಭ್ಯ,ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಿಸುವುದಾಗಿದೆ.ಯಾತ್ರೆಯ ವೇಳೆ ಕೃಷಿ ಕ್ಷೇತ್ರದ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಲಾಗುತ್ತಿದ್ದು,ರೈತರನ್ನು ಸಂಘಟಿತವಾಗಿ ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ.
KRS ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು,ರೈತ ಸಮುದಾಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಮುಂದಿನ ದಿನಗಳಲ್ಲಿಯೂ ಯಾತ್ರೆ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮುಂದುವರಿಯಲಿದೆ.
ಈ ಯಾತ್ರೆಯಲ್ಲಿ ಎಲ್ಲಾ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ರೈತರ ಹಕ್ಕುಗಳ ಹೋರಾಟವನ್ನು ಬಲಪಡಿಸಲು ಸಹಕರಿಸುವಂತೆ KRS ಪಕ್ಷ ವಿನಂತಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಶ್ರೀ ರಮೇಶ್ ಗೌಡ,ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ,ವಿಶ್ವನಾಥ್ ನೆಲಮಂಗಲ,ಕುಣಿಗಲ್ ತಾಲೂಕ ಅಧ್ಯಕ್ಷರಾದ ಶ್ರೀ ಮಂಜುನಾಥ,ಉಪಾಧ್ಯಕ್ಷರಾದ ವಿಜಯಕುಮಾರ,ಸಿಕಂದರ್, ಶ್ರೀನಿವಾಸ,ಪ್ರಸನ್ನ,ಮಾರಪ್ಪ,ಗಂಗಾಧರ, ನಾಗರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.