ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT

ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT

ವೀರಮಾರ್ಗ ನ್ಯೂಸ್ ಹಾವೇರಿ : ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಇಂದು (ಮಂಗಳವಾರ) ಪ್ರಕಟಿಸಿರುವ ೨೦೨೪ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆಯ ಸಚಿನ್ ಬಸವರಾಜ ಗುತ್ತೂರ್ ಅವರು ಉತ್ತಮ ಸಾಧನೆ ಮಾಡಿದ್ದಾರೆ.
೨೯ ವರ್ಷದ ಸಚಿನ್ ಅವರು ಒಟ್ಟಾರೆ ರ್ಯಾಂಕಿಂಗ್‌ನಲ್ಲಿ ೪೧ನೇ ಸ್ಥಾನ ಪಡೆದಿದ್ದಾರೆ. ಇವರು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿಯಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಸಚಿನ್ ಗುತ್ತೂರ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಹರಿಹರದಲ್ಲಿ ಪ್ರಾಥಮಿಕ ಶಿಕ್ಷಣ, ಉನ್ನತ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ಮುಗಿಸಿದ್ದಾರೆ.
ಇತರ ಫಲಿತಾಂಶ ಹೀಗಿದೆ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶಕ್ತಿ ದುಬೆ ಅವರು ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹರ್ಷಿತಾ ಗೋಯಲ್ ಅವರು ದ್ವಿತೀಯ ಮತ್ತು ದೋಂಗ್ರೆ ಅರ್ಚಿತ್ ಪರಾಗ್ ಅವರು ೩ನೇ ಸ್ಥಾನ ಗಳಿಸುವ ಮೂಲಕ ಅದ್ಭುತ ಸಾಧನೆ ಮೆರೆದಿದ್ದಾರೆ.
ಶಕ್ತಿ ದುಬೆ ಅವರು ಅಲಹಾಬಾದ್ ವಿಶ್ವವಿದ್ಯಾಲಯದಿಂದ ಜೀವ ರಸಾಯನಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ವಿಷಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡಿದ್ದರು ಎಂದು ಯುಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬರೋಡಾದ ಎಂಎಸ್ ವಿಶ್ವವಿದ್ಯಾಲಯದ ಬಿ.ಕಾಂ ಪದವೀಧರೆ ಹರ್ಷಿತಾ ಗೋಯಲ್, ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧ ವಿಷಯವನ್ನು ಇವರು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡಿದ್ದರು.

ವೆಲ್ಲೂರಿನ ವಿಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿ.ಟೆಕ್) ಪದವಿ ಪಡೆದಿರುವ ಡೊಂಗ್ರೆ ಅರ್ಚಿತ್ ಪರಾಗ್, ತತ್ವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿಟ್ಟುಕೊಂಡು ಮೂರನೇ ರ‍್ಯಾಂಕ್ ಪಡೆದಿದ್ದಾರೆ.
೨೦೨೪ರ ಯುಪಿಎಸ್‌ಸಿ (ಪೂರ್ವಭಾವಿ) ಪರೀಕ್ಷೆ ಕಳೆದ ವರ್ಷ ಜೂ.೧೬ರಂದು ನಡೆದಿತ್ತು. ಒಟ್ಟು ೯,೯೨,೫೯೯ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ೫,೮೩,೨೧೩ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸೆಪ್ಟೆಂಬರ್ ೨೦೨೪ರಲ್ಲಿ ನಡೆದ ಲಿಖಿತ (ಮುಖ್ಯ) ಪರೀಕ್ಷೆಗೆ ಒಟ್ಟು ೧೪,೬೨೭ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಈ ಪೈಕಿ ೨,೮೪೫ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆ ಅಥವಾ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಅಂತಿಮ ಪಟ್ಟಿಯಲ್ಲಿ ೧೦೦೯ ಅಭ್ಯರ್ಥಿಗಳು ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.