ಸದನದಲ್ಲಿ ಗ್ಯಾರಂಟಿ ಗದ್ದಲ
ವೀರಮಾರ್ಗ ನ್ಯೂಸ್ : ಬೆಂಗಳೂರು, ಮಾ. ೧೧ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರುಗಳನ್ನು ನೇಮಕ ಮಾಡಿ ಅವರಿಗೆ ಸರ್ಕಾರದಿಂದ ಗೌರವ ಧನ, ಭತ್ಯೆ ನೀಡುತ್ತಿರುವ ವಿಚಾರ ವಿಧಾನಸಭೆಯಲ್ಲಿಂದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿ ಈ ಸಮಿತಿಗಳನ್ನು ರದ್ದುಪಡಿಸಿ ಎಂದು ಆಗ್ರಹಿಸಿ ವಿಪಕ್ಷಗಳು ಸದನದಲ್ಲಿ ಧರಣಿ ನಡೆಸಿದವು.
ಪ್ರಶ್ನೋತ್ತವ ಅವಧಿಯಲ್ಲೇ ಗ್ಯಾರಂಟಿ ಅನುಷ್ಠಾನ ಸಮಿತಿ ವಿಚಾರ ಸದನದಲ್ಲಿ ಪ್ರಸ್ತಾಪಗೊಂಡು ವಿಪಕ್ಷಗಳ ಆಕ್ಷೇಪ, ಅಸಮಾಧಾನಕ್ಕೆ ಕಾರಣವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ರೂಪುಗೊಂಡು ಸದನವನ್ನು ಸಭಾಧ್ಯಕ್ಷರು ೧೦ ನಿಮಿಷಗಳ ಕಾಲ ಮುಂದೂಡಿದರು.
ನಂತರ ಸಭಾಧ್ಯಕ್ಷರ ಕೊಠಡಿಯಲ್ಲಿ ಸಂಧಾನ ಸಭೆ ನಡೆದು ಅರ್ಧ ಗಂಟೆ ಬಳಿಕ ಸದನ ಮತ್ತೆ ಸಮಾವೇಶಗೊಂಡಿತು.
ಸರ್ಕಾರದ ತೀರ್ಮಾನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡು ವಿಪಕ್ಷ ಸದಸ್ಯರು ಶಾಸಕರ ನೇತೃತ್ವದಲ್ಲೇ ಸಮಿತಿ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಈಗಲೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿ, ಸದ್ಯಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಮುಂದುವರೆಯುತ್ತವೆ ಎಂದು ಹೇಳಿ, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರದಿಂದ ತೃಪ್ತರಾಗದ ವಿಪಕ್ಷ ಸದಸ್ಯರು ಪ್ರತಿ ತಾಲ್ಲೂಕಿನಲ್ಲೂ ಶಾಸಕರೇ ಸುಪ್ರೀಂ. ಶಾಸಕರನ್ನು ಬಿಟ್ಟು ಬೇರೊಬ್ಬರು ಅಧಿಕಾರಿಗಳ ಸಭೆ ನಡೆಸುವುದು ಸರಿಯಲ್ಲ, ಈ ಸಮಿತಿಯನ್ನು ರದ್ದು ಮಾಡಿ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ ಸರ್ಕಾರದಿಂದ ಗ್ಯಾರಂಟಿ ಸಮಿತಿ ಸದಸ್ಯರಿಗೆ ಹಣ ನೀಡುವುದು ಬೇಡ ಎಂದು ಪಟ್ಟು ಹಿಡಿದು ಧರಣಿ ಆರಂಭಿಸಿದರು.
ಪ್ರತಿಪಕ್ಷ ಸದಸ್ಯರ ಧರಣಿಯಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು.
ಇದರ ನಡುವೆಯೇ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶ್ನೋತ್ತರ ಕಲಾಪ, ವಿಧೇಯಕ ಮಂಡನೆ ಕಲಾಪವನ್ನು ನಡೆಸಿ, ನಂತರ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ನ ಎಂ.ಟಿ. ಕೃಷ್ಣಪ್ಪ ಅವರು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ನೇಮಕಗೊಂಡಿರುವ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅಧ್ಯಕ್ಷರು, ಸದಸ್ಯರುಗಳಿಗೆ ಸರ್ಕಾರ ನೀಡುತ್ತಿರುವ ಸಂಭಾವನೆ ಎಷ್ಟು ಎಂದು ಪ್ರಶ್ನೆ ಕೇಳಿದ್ದರು.
ಇದಕ್ಕೆ ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಮಾಸಿಕ ಗೌರವ ಧನ ೪೦ ಸಾವಿರ, ಉಪಾಧ್ಯಕ್ಷರಿಗೆ ಮಾಸಿಕ ಗೌರವ ಧನ ೧೦ ಸಾವಿರ ಹಾಗೂ ಸದಸ್ಯರಿಗೆ ಸಭಾ ಭತ್ಯೆ ತಿಂಗಳಿಗೆ ಗರಿಷ್ಠ ೨ ಸಭೆಗಳಂತೆ ಪ್ರತಿ ಸಭೆಗೆ ೧೧೦೦ ರೂ., ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಮಾಸಿಕ ಗೌರವ ಧನ ೨೫ ಸಾವಿರ, ಪ್ರತಿ ಸದಸ್ಯರಿಗೆ ಸಭಾ ಭತ್ಯೆ ತಿಂಗಳಿಗೆ ೨ ಸಭೆಗಳಂತೆ ಸಾವಿರ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಸಚಿವರ ಈ ಉತ್ತರ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಸಿಟ್ಟಿಗೆ ಕಾರಣವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರದ ಬೊಕ್ಕಸದಿಂದ ಹಣ ಕೊಡುತ್ತಿದ್ದೀರಿ, ಇದು ಕಾನೂನು ಬಾಹಿರ. ಈ ರೀತಿ ಹಣ ಕೊಡಲು ಅವಕಾಶ ಇಲ್ಲ. ಕೂಡಲೇ ಇದನ್ನು ವಾಪಸ್ ಪಡೆಯಿರಿ ಎಂದು ಒಮ್ಮೆಗೆ ಎಲ್ಲ ಸದಸ್ಯರು ಏರಿದ ಧ್ವನಿಯಲ್ಲಿ ಆಗ್ರಹಿಸಿದ್ದು, ಸದನದಲ್ಲಿ ಗದ್ದಲದ ವಾತಾವರಣಕ್ಕೆ ಕಾರಣವಾಯಿತು.
ಈ ಗದ್ದಲದಲ್ಲೇ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚು ಮಾಡಲು ಹಿಂದೆ-ಮುಂದೆ ನೋಡುತ್ತೀರಿ, ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರುಗಳಿಗೆ ದೊಡ್ಡ ಪ್ರಮಾಣದಲ್ಲಿ ಗೌರವ ಧನ ನೀಡುತ್ತಿದ್ದೀರಿ, ಇದು ಸರಿಯಲ್ಲ. ಗ್ಯಾರಂಟಿ ಯೋಜನೆಗಳಿಗೆ ಆನ್ಲೈನ್ ಮುಖಾಂತರವೇ ಹಣ ಪಾವತಿಯಾಗುತ್ತಿದೆ. ಸರ್ಕಾರದಿಂದ ಹಣ ಕೊಡುವುದು ಸರಿಯಲ್ಲ ಎಂದರು.
ಆಶ್ರಯ, ವಸತಿ ಸೇರಿದಂತೆ ಯಾವುದೇ ಸಮಿತಿಗಳ ಅಧ್ಯಕ್ಷರುಗಳಿಗೆ ಗೌರವ ಧನ ನೀಡುತ್ತಿಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು,. ಸದಸ್ಯರುಗಳಿಗೆ ಗೌರವ ಧನ ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ನೇಮಕಾತಿಗಳಿಗೆ ನಿಯಮಗಳಿವೆ, ಯಾವ ಆಧಾರದ ಮೇಲೆ ಸಮಿತಿಗಳಿಗೆ ನೇಮಕಾತಿಗಳಾಗಿವೆ. ಇವರೆಲ್ಲಾ ಏನು ಓದಿದ್ದಾರೆ. ಇವರನ್ನು ನೇಮಕ ಮಾಡಿ ಸಂಬಳ, ಕಾರು, ಬಂಗಲೆ, ರಾಜ್ಯ ಸಚಿವ ಸ್ಥಾನಮಾನ ಎಲ್ಲ ನೀಡುತ್ತಿದ್ದೀರಿ. ಇದು ಸರಿಯಲ್ಲ ಎಂದು ಏರಿದ ಧ್ವನಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸರ್ಕಾರಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ವ್ಯತ್ಯಾಸ ಇಲ್ಲದಂತಾಗಿದೆ. ವಾಲ್ಮೀಕಿ ನಿಗಮದ ೧೮೦ ಕೋಟಿ ರೂ.ಗಳನ್ನು ಬಳ್ಳಾರಿ ಚುನಾವಣೆಯಲ್ಲಿ ಹಂಚುತ್ತೀರಿ. ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹೀಗೆ ಹಂಚಲು ಅವಕಾಶ ಇದೆಯೇ, ಕಾಂಗ್ರೆಸ್ ಪಕ್ಷದಲ್ಲಿ ಹಣ ಇಲ್ಲ ಎಂದಾದರೆ ರಸ್ತೆಯಲ್ಲಿ ಭಿಕ್ಷೆ ಬೇಡಿ. ಸರ್ಕಾರದ ಹಣವನ್ನು ಬಳಸಿಕೊಳ್ಳುವುದಕ್ಕೆ ನಾವು ಬಿಡಲ್ಲ. ಇದಕ್ಕೆ ನಮ್ಮ ವಿರೋಧವಿದೆ. ಇದನ್ನು ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು.
ಇದಕ್ಕೆ ಬಿಜೆಪಿ-ಜೆಡಿಎಸ್ನ ಎಲ್ಲ ಸದಸ್ಯರು ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರುಗಳಿಗೆ ಹಣ ನೀಡುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದರು.
ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ತಾರಕಕ್ಕೇರಿತು. ಆಗ ಸಚಿವ ಕೃಷ್ಣಬೈರೇಗೌಡ ಅವರು, ಈ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಹೇಳಿದ್ದು, ಪ್ರತಿಪಕ್ಷ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ರಾಜಕಾರಣ ಮಾಡುತ್ತಿರುವುದು ನೀವು, ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿ ಹಣ ಹಂಚುತ್ತಿದ್ದೀರಿ. ಸರ್ಕಾರದ ಹಣ ಹಂಚುತ್ತಿರುವುದು ಸರಿಯೇ. ಈ ಹಿಂದಿನ ಯಾವುದೇ ಸರ್ಕಾರಗಳು ಈ ರೀತಿ ಮಾಡುತ್ತಿರಲ್ಲ ಎಂದು ಸರ್ಕಾರದ ವಿರುದ್ಧ ಒಮ್ಮೆಗೆ ಮುಗಿ ಬಿದ್ದರು.

ಇದರಿಂದ ಸದನದಲ್ಲಿ ಕೋಲಾಹಲದ ವಾತಾವರಣ ರೂಪುಗೊಂಡಿತು.
ಗದ್ದಲದಲ್ಲೇ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಈ ಸರ್ಕಾರವನ್ನು ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಸರ್ಕಾರದಲ್ಲಿ ಭಾಗಿಯಾಗುವ ಹಕ್ಕಿದೆ. ಅವರ ಹಕ್ಕನ್ನು ನಾವು ನೀಡಿದ್ದೇವೆ ಅಷ್ಟೇ ಎಂದು ಹೇಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ನೀಡುತ್ತಿರುವ ಗೌರವ ಧನ, ಭತ್ಯೆಯನ್ನು ಸಮರ್ಥಿಸಿಕೊಂಡರು.
ಉಪಮುಖ್ಯಮಂತ್ರಿಗಳ ಈ ಉತ್ತರದಿಂದ ಮತ್ತಷ್ಟು ಸಿಟ್ಟಾದ ಪ್ರತಿಪಕ್ಷ ಸದಸ್ಯರು ಧರಣಿ ನಡೆಸಲು ಮುಂದಾಗುತ್ತಿದ್ದಂತೆಯೇ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.
ಮತ್ತೆ ಸಮಾವೇಶ, ಧರಣಿ
ಸದನ ಮತ್ತೆ ಸಮಾವೇಶಗೊಂಡಾಗ ಸರ್ಕಾರ ನೀಡಿದ ಉತ್ತರ ಪ್ರತಿಪಕ್ಷ ಸದಸ್ಯರಿಗೆ ತೃಪ್ತಿ ತರಲಿಲ್ಲ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಶಾಸಕರನ್ನು ನಿರ್ಲಕ್ಷಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ಮಾಡಿರುವುದು ಸರಿಯಲ್ಲ. ಶಾಸಕರ ಮೇಲೆ ನಂಬಿಕೆ ಇಲ್ಲವೇ, ಈ ಸಮಿತಿ ಕಾನೂನು ಬಾಹಿರ. ಇದನ್ನು ವಾಪಸ್ ಪಡೆದು ಶಾಸಕರ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸಿ ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಮುಖ್ಯಮಂತ್ರಿ ಸುಪ್ರೀಂ, ಜಿಲ್ಲೆಗೆ ಜಿಲ್ಲಾ ಮಂತ್ರಿ ಸುಪ್ರೀಂ, ಸದನಕ್ಕೆ ಸಭಾಧ್ಯಕ್ಷರೇ ಸುಪ್ರೀಂ. ಹಾಗೆ ತಾಲ್ಲೂಕಿಗೆ ಶಾಸಕರೇ ಸುಪ್ರೀಂ. ಈ ವಿಚಾರದಲ್ಲಿ ರಾಜಕೀಯ ಬೇಡ. ಶಾಸಕರ ಹಕ್ಕುಗಳನ್ನು ಮೊಟಕುಗೊಳಿಸುವ ಪರ್ಯಾಯ ಸಮಿತಿಗಳ ರಚನೆ ಬೇಡ. ಈ ಸಮಿತಿಗಳನ್ನು ರದ್ದು ಮಾಡಿ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಸದಸ್ಯರನ್ನು ನೇಮಕ ಮಾಡಿಕೊಳ್ಳಿ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಾರ್ಯಕರ್ತರ ಅಧ್ಯಕ್ಷತೆಯ ಸಮಿತಿ ಮಾಡಿ ಅವರಿಗೆ ಸರ್ಕಾರದ ಬೊಕ್ಕಸದಿಂದ ಹಣ ಕೊಡುವುದನ್ನು ನಾವು ಒಪ್ಪಲ್ಲ. ಬೇಕಾದರೆ ನಿಮ್ಮ ಪಕ್ಷದ ಕಚೇರಿಯಿಂದ ಕೆಲಸ ಮಾಡಿ. ಈ ಸರ್ಕಾರ ಮನೆ ಹಾಳು ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.
ಈ ಸಮಿತಿ ರಚನೆಯಿಂದ ಶಾಸಕರ ಹಕ್ಕುಗಳಿಗೆ ಚ್ಯುತಿಯಾಗಿದೆ. ನಾವು ನಮ್ಮ ಕೆಲಸ ಮಾಡಬೇಕಿದೆ. ನಾಮನಿರ್ದೇಶನ ಮಾಡಿದವರ ಗುಲಾಮರಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಕೂಡಲೇ ಸಮಿತಿಗಳನ್ನು ರದ್ದು ಮಾಡಿ, ಬೇಕಾದರೆ ನಿಮ್ಮ ಜಿಲ್ಲಾಧ್ಯಕ್ಷರಿಗೆ, ತಾಲ್ಲೂಕು ಅಧ್ಯಕ್ಷರಿಗೆ ಪಕ್ಷದಿಂದ ಸಂಬಳ ಕೊಟ್ಟಿಕೊಳ್ಳಿ. ಈ ಸಮಿತಿಗಳು ರದ್ದಾಗಲೇಬೇಕು. ಯಾರೂ ಅಧಿಕಾರದಲ್ಲಿ ಶಾಶ್ವತವಲ್ಲ, ಅರ್ಥ ಮಾಡಿಕೊಳ್ಳಿ ಎಂದು ಹೇಳಿ, ಸಮಿತಿ ರದ್ದತಿಗೆ ಆಗ್ರಹಿಸಿ ತಮ್ಮ ಸದಸ್ಯರ ಜತೆ ಧರಣಿ ಆರಂಭಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗ ತೊಡಗಿದರು. ಇದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿತು.
ಗದ್ದಲದಲ್ಲಿಯೇ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ, ವಿಧೇಯಕ ಮಂಡನೆ ಕಲಾಪಗಳನ್ನು ನಡೆಸಿ, ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.