ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ಅಡಿಪಾಯ : ರಂಭಾಪುರಿಶ್ರೀ

ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ಅಡಿಪಾಯ : ರಂಭಾಪುರಿಶ್ರೀ
ವೀರಮಾರ್ಗ ನ್ಯೂಸ್ ರಟ್ಟಿಹಳ್ಳಿ :
ಸೌಹಾರ್ದಯುತ ಸಹಬಾಳ್ವೆ ಜೀವನದ ಪರಮ ಗುರಿಯಾಗಬೇಕು. ಯೋಗ್ಯ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಉತ್ತಮ ಗುರಿ ಮತ್ತು ಆದರ್ಶ ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ಅಡಿಪಾಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಠ್ಯಬ್ಧಿ ಸಮಾರಂಭದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಧರ್ಮ ಯಶಸ್ಸು ನೀತಿ ದಕ್ಷತೆ ಮತ್ತು ಒಳ್ಳೆಯ ಮಾತು ಅಳವಡಿಸಿಕೊಂಡರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ನಿರರ್ಥಕ. ಒಳ್ಳೆಯ ಗುಣ ಒಳ್ಳೆಯ ಸಂಬಂಧ ಜೀವನದ ಅಮೂಲ್ಯ ಸಂಪತ್ತು. ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಜೀವನದ ಉನ್ನತಿಗೆ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಮುಖ್ಯ. ವೀರಶೈವ ಧರ್ಮದಲ್ಲಿ ಕ್ರಿಯಾಶೀಲ ಬದುಕಿಗೆ ಬಹಳಷ್ಟು ಮಹತ್ವವಿದೆ. ಮಾತನಾಡುವುದು ಸಾಧನೆಯಲ್ಲ. ಸಾಧನೆಗಳು ಜೀವನಕ್ಕೆ ಮೆರಗು ಗೌರವ ತಂದು ಕೊಡುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯ ಮೌಲ್ಯಗಳು ಜೀವನದ ಸರ್ವಾಂಗೀಣ ಉನ್ನತಿಗೆ ಅಡಿಪಾಯವಾಗಿವೆ. ಅರಿತು ಆಚರಿಸಿ ಬಾಳಿದಾಗ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುತ್ತವೆ. ಸರಳ ಸಾತ್ವಿಕತೆಗೆ ಹೆಸರಾದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಆದರ್ಶ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಬದುಕನ್ನು ಸಾರ್ಥಕಪಡಿಕೊಂಡಿದ್ದಾರೆ. ಮನುಷ್ಯನಲ್ಲಿ ಅಡಗಿರುವ ಅಜ್ಞಾನ ದೂರ ಮಾಡಿ ಸಂಸ್ಕಾರ ಸಂಸ್ಕೃತಿ ಬಿತ್ತಿ ಬೆಳೆದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಹರುಷ ವ್ಯಕ್ತಪಡಿಸಿ ಶ್ರೀ ಜಗದ್ಗುರು ರಂಭಾಪುರಿ ಪೀಠದಿಂದ ಅವರಿಗೆ ರೇಶ್ಮೆ ಮಡಿ ಫಲ ಪುಷ್ಪದೊಂದಿಗೆ “ಶಿವಾದ್ವೈತ ಸಿದ್ಧಾಂತ ಪ್ರಬೋಧಕ” ಎಂಬ ಪ್ರಶಸ್ತಿಯಿತ್ತು ಶುಭ ಹಾರೈಸಿದರು.
ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಸಮಾರಂಭವನ್ನು ಉದ್ಘಾಟಿಸಿ ಶಿವಲಿಂಗ ಶ್ರೀಗಳ ಕ್ರಿಯಾಶೀಲತೆಯ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಶಾಸಕ ಯು.ಬಿ.ಬಣಕಾರ ಮಾತನಾಡಿ ಕಬ್ಬಿಣಕಂಥಿಮಠ ಈ ಭಾಗದ ಭಕ್ತರಿಗೆ ಸಂಸ್ಕಾರ ಸದ್ವಿಚಾರಗಳನ್ನು ಬೋಧಿಸುತ್ತ ಬಂದಿದೆ. ಶಿವಲಿಂಗ ಶ್ರೀಗಳು ಶ್ರೀ ಮಠದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ’ಶ್ರೀ ಕಬ್ಬಿಣಕಂಥಿಮಠ ಪರಂಪರೆ’ ಪರಿಚಯ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಧರ್ಮದಿಂದ ವಿಮುಖನಾಗಿ ಬಾಳಿದರೆ ಅವನತಿ ತಪ್ಪಿದ್ದಲ್ಲ. ನಾವೆಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು. ಶಿವಲಿಂಗ ಶ್ರೀಗಳವರು ತಮ್ಮ ನಿರಂತರ ಶ್ರಮ ಮತ್ತು ಸಾಧನೆಯಿಂದ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು. ಸಮಾರಂಭದ ನೇತೃತ್ವ ವಹಿಸಿದ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸುಖಮಯ ಜೀವನಕ್ಕೆ ಶಾಂತಿ ನೆಮ್ಮದಿ ಮುಖ್ಯ. ಧರ್ಮ ಪರಿಪಾಲನೆಯಿಂದ ಬದುಕಿನಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಮಹಾಗುರುವಿನ ಕೃಪಾ ಕಾರುಣ್ಯದಿಂದ ಬದುಕಿನ ೬೦ ವರುಷಗಳ ಅವಧಿಯಲ್ಲಿ ಭಾರತೀಯ ಸಂಸ್ಕೃತಿಯ ಬೆಳವಣಿಗೆಗಾಗಿ ಮತ್ತು ವೀರಶೈವ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಅಳಿಲು ಸೇವೆ ಸಲ್ಲಿಸಿದ ಆತ್ಮ ಸಂತೃಪ್ತಿ ನಮಗಿದೆ. ೬೦ನೇ ವರ್ಷದ ಷಷ್ಠ್ಯಬ್ಧಿ ಸಮಾರಂಭಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿ ಆಶೀರ್ವದಿಸಿದ್ದು ನಮ್ಮ ಜೀವನದ ಅಹೋಭಾಗ್ಯವೆಂದು ಹರುಷ ವ್ಯಕ್ಡಪಡಿಸಿದರು.
ಈ ಪವಿತ್ರ ಸಮಾರಂಭದಲ್ಲಿ ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ದಿಂಡದಹಳ್ಳಿ ಪಶುಪತಿ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಪಾಲ್ಗೊಂಡು ಶಿವಲಿಂಗ ಶ್ರೀಗಳವರಿಗೆ ಗೌರವಿಸಿ ಸತ್ಕರಿಸಿದರು. ಮುಖ್ಯ ಅತಿಥಿಗಳಾಗಿ ಟಿಎಪಿಸಿಎಮ್‌ಎಸ್ ಅಧ್ಯಕ್ಷ ಪ್ರಶಾಂತ ದ್ಯಾವಕ್ಕಳವರ, ನಿವೃತ್ತ ಐಎಫ್‌ಎಸ್ ಅಧಿಕಾರಿ ಮಂಜುನಾಥ ತಂಬಾಕದ, ಜಿ.ಪಂ.ಮಾಜಿ ಸದಸ್ಯರಾದ ಪ್ರಕಾಶ ಬನ್ನಿಕೋಡ, ನಾರಾಯಣಪ್ಪ ಗೌರಕ್ಕನವರ, ಎನ್.ಎಮ್.ಈಟೇರ, ಪಿ.ಡಿ.ಬಸವನಗೌಡ್ರ ಸೇರಿದಂತೆ ಎನ್.ಜಿ.ನಾಗನಗೌಡ್ರ, ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ಹೇಮಣ್ಣ ಮುದಿರಡ್ಡೇರ್, ಎ.ಕೆ.ಪಾಟೀಲ, ಡಾ.ನಿಂಗಪ್ಪ ಚಳಗೇರಿ, ಶಂಭಣ್ಣ ಗೂಳಪ್ಪನವರ, ಮಾಲತೇಶಗೌಡ ಗಂಗೋಳ, ಹನುಮಂತಗೌಡ ಭರಮಣ್ಣನವರ, ಕಂಠಾಧರ ಅಂಗಡಿ, ಸಂದೀಪ ಎಸ್.ಪಾಟೀಲ, ಆರ್.ಎನ್.ಗಂಗೋಳ, ಮಹೇಶಯ್ಯ ಮಠದ, ಪ್ರಭುಲಿಂಗಸ್ವಾಮಿ ಕಬ್ಬಿಣಕಂಥಿಮಠ, ಮಲ್ಲೇಶಪ್ಪ ಹುಲ್ಮನಿ, ಪರಮೇಶಪ್ಪ ಹಲಗೇರಿ, ರುದ್ರಮುನಿಸ್ವಾಮಿ ಆರಾಧ್ಯಮಠ, ವಿರೂಪಾಕ್ಷಪ್ಪ ಹಂಪಾಳಿ ವೀರನಗೌಡ ಪ್ಯಾಟಿಗೌಡ್ರ, ಲಿಂಗಯ್ಯ ಹಿರೇಮಠ, ರಾಜು ಹರವಿಶೆಟ್ರ ಮೊದಲಾದವರು ಪಾಲ್ಗೊಂಡು ಶ್ರೀಗಳವರ ಯಶೋಗಾಥೆಯನ್ನು ಕೊಂಡಾಡಿದರು. ಡಾ.ಎಸ್.ಪಿ.ಗೌಡರ್ ಪ್ರಾಸ್ತಾವಿಕ ನುಡಿದರು. ವಸಂತ ದ್ಯಾವಕ್ಕಳವರ ಸ್ವಾಗತಿಸಿದರು. ಸಿ.ಎಸ್.ಚಕ್ರಸಾಲಿ, ಸಿ.ಬಿ.ಅಂಗಡಿ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶಿವಲಿಂಗ ಶ್ರೀಗಳಿಗೆ ಮಂಗಲ ಸ್ನಾನ ಮಾಡಿಸಿ ನೂತನಾಂಬರ ತೊಡಿಸಿ ಸಾರೋಟ ಮೆರವಣಿಗೆಯ ಮೂಲಕ ಬರಮಾಡಿಕೊಂಡರು. ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು, ವೀರಗಾಸೆ, ಡೊಳ್ಳು ಭಜನಾ ಸಂಘದ ಕಲಾವಿದರು ಉತ್ಸವಕ್ಕೆ ಮೆರಗು ತಂದರು. ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಜರುಗಿತು.