ಹಲಗೆ ಬಾರಿಸುವ ವಿಚಾರಕ್ಕೆ ಹಲ್ಲೆ : ದೂರು, ಪ್ರತಿ ದೂರು 9 ಜನರು ಬಂಧನ
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರು : ಹಲಗೆ ಬಾರಿಸುತ್ತ ನಿಂತಿದ್ದ ಯುವಕರ ಮೇಲೆ ಅನ್ಯ ಕೋಮಿನ ಯುವಕರ ಗುಂಪೊಂದು ಬ್ಲಡ್ನಿಂದ ಹಲ್ಲೆ ಮಾಡಿರುವ ಘಟನೆ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇಲ್ಲಿಯ ಮಾರುತಿ ನಗರದ ನಿವಾಸಿ ಕಿರಣ ನಾಗಪ್ಪ ಲಮಾಣಿ ಹಾಗೂ ಶಿವಣ್ಣ ಮಾರ್ತಾಂಡಪ್ಪ ಅಂಗಡಿ ಹಲ್ಲೆಗೀಡಾದವರು. ಮಾರುತಿ ನಗರದಲ್ಲಿ ಹಲಗೆ ಬಾರಿಸುತ್ತ ನಿಂತಿದ್ದಾಗ ನಾವು ಹೇಳಿದಂತೆ ಹಲಗೆ ಬಾರಿಸಬೇಕು ಎಂದು ಅನ್ಯಕೋಮಿನ ಯುವಕರು ಒತ್ತಾಯಿಸಿದರು.
ಆ ರೀತಿ ನಮಗೆ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶಾಬಜಾ ದಾದಾಪೀರ ಹರಪನಹಳ್ಳಿ, ಮಹ್ಮದಮಿಯಾನ ಜಾಪರ ವುಲ್ಲಾ ಬಾವಿಕಟ್ಟಿ, ಮಹ್ಮ ದಶಫರವುಲ್ಲಾ ಮೈ ದೂರ, ಮಹ್ಮದಮುಜಿಲಾ ಶರೀಫವುಲ್ಲಾ ಪೀರಜಾದೆ, ಇರ್ಫಾನ ಹುಸೇನ ಅಮ್ಮಿನಬಾವಿ, ಜೀಶನ ಮೊಹಿದ್ದೀನ್ ಮುಲ್ಲಾ ವಿರುದ್ಧ ಜಾತಿನಿಂದನೆ ಹಾಗೂ ಮಾರಣಾಂತಿಕ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಪ್ರತಿ ದೂರು ನೀಡಿರುವ ಜೀಶನ ಮುಲ್ಲಾ, ಮಸೀದಿ ಬಳಿ ಹಲಗೆ ಬಾರಿಸಬೇಡಿ ಮುಂದೆ ಹೋಗಿ ಎಂದು ಹೇಳಿದ್ದಕ್ಕೆ ಕಿರಣ ಲಮಾಣಿ, ಗಣೇಶ ನ್ಯಾಮತಿ, ಶಿವಣ್ಣ ಅಂಗಡಿ, ಭರತ ಕೂಲೇರ, ಪ್ರಶಾಂತ ಕೂಲೇರ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 9 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.