ದಾವಣಗೆರೆ : ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್.ಎಸ್.ಕೆ) ಸಮಾಜವು ರಾಜ್ಯದ 175 ತಾಲೂಕುಗಳಲ್ಲಿ ವ್ಯಾಪಿಸಿದ್ದು, ಸಂಸ್ಕೃತಿ ಮತ್ತು ಸ್ವಾವಲಂಬನೆಯ ಮೂಲಕ ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ’ ಎಂದು ಸಮಾಜದ ರಾಜ್ಯಾಧ್ಯಕ್ಷ ಡಾ||.ಶಶಿಕುಮಾರ್ ಮೆಹರ್ವಾಡೆ ಹೇಳಿದರು.
ಮಂಗಳವಾರ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ನಮ್ಮ ಸಮಾಜದ ಜನ ಸ್ವಾಭಿಮಾನಿಗಳು ಮತ್ತು ಹೆಚ್ಚು ಸ್ವಯಂ ಉದ್ಯೋಗಿಗಳು. ದಾವಣಗೆರೆಯಂತಹ ನಗರಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ, ತಮ್ಮ ಕರ್ತವ್ಯ ನಿಷ್ಠೆ ಮತ್ತು ಉದ್ಯಮಶೀಲತೆಯಿಂದ ಇಡೀ ಊರಿನ ಗಮನ ಸೆಳೆದಿದ್ದಾರೆ. ಸಮಾಜದ ಅಡಿಯಲ್ಲಿ ಪಂಚ ಕಮಿಟಿಗಳು, ದೇವಸ್ಥಾನ, ಶಾಲಾ-ಕಾಲೇಜು ಹಾಗೂ ಬ್ಯಾಂಕುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ,” ಎಂದರು.
“ಹಿAದೂ ಧರ್ಮದ ಆಚರಣೆಗಳನ್ನು ಉಳಿಸಿಕೊಂಡು ಹೋಗುವಲ್ಲಿ ಎಸ್.ಎಸ್.ಕೆ ಸಮಾಜ ಮುಂಚೂಣಿಯಲ್ಲಿದೆ. ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ” ಎಂದು ಅವರು ಹರ್ಷ ವ್ಯಕ್ತಪಡಿಸಿದರು.
“ಸಮಾಜದ ಅಭಿವೃದ್ಧಿಗೆ ತಂತ್ರಜ್ಞಾನದ ಅಗತ್ಯವನ್ನು ಒತ್ತಿ ಹೇಳಿದ ಅವರು, “ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸಮಾಜದ ವತಿಯಿಂದ ಆನ್ಲೈನ್ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದರಿಂದ ಸಮಾಜದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ,” ಯುವ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಜ್ಯ ಮಟ್ಟದ ಬೃಹತ್ ಯುವ ಸಮಾವೇಶ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
ಸಮಾಜದ ರಾಜ್ಯ ಕಾರ್ಯದರ್ಶಿ ಅಶೋಕ್ ರಾಯಭಾಗಿ ಮಾತನಾಡಿ, “ಭಾರತೀಯ ಸಂಸ್ಕೃತಿ ಹಾಗೂ ಹಿಂದುತ್ವದ ಆಶಯಗಳೊಂದಿಗೆ ಮುನ್ನಡೆಯುತ್ತಿರುವ ಸೂರ್ಯವಂಶ ಸಹಸ್ರಾರ್ಜುನ್ ಕ್ಷತ್ರಿಯ ಸಮಾಜದ ಆಶೋತ್ತರಗಳನ್ನು ಈಡೇರಿಸುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಜನರಿಗೆ ಸರ್ಕಾರದ ಮಟ್ಟದಲ್ಲಿ ಸಿಗುವ ಸೌಲಭ್ಯಗಳನ್ನು ಅರ್ಹರು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
“ಇ-ಸೇವಾ ಕೇಂದ್ರಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ಯಾವುದೇ ರಾಜಕೀಯ ಪ್ರಭಾವದ ಅಗತ್ಯವಿಲ್ಲ. ಸಮಾಜವನ್ನು ಸಂಘಟಿಸಲು ರಾಜ್ಯ ಮಟ್ಟದ ಯುವ ಸಂಘಟನೆ ಮತ್ತು ಮಹಿಳಾ ಘಟಕಗಳನ್ನು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು” ಎಂದರು.
“ಸಮಾಜದ ವಿವಿಧ ಸ್ತರದ ಜನರನ್ನು ತಲುಪಲು ಗುರುಪೀಠ, ಪದವೀಧರರ ಸಮಿತಿ, ವೈದ್ಯರ, ಎಂಜಿನಿಯರ್ ಗಳ ಹಾಗೂ ಚಾರ್ಟರ್ಡ್ ಅಕೌಂಟೆAಟ್ ಗಳ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುತ್ತಿದೆ.ಸಮಾಜದ ಈ ವಿವಿಧ ಸಮಿತಿಗಳಲ್ಲಿ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಲು ಆಸಕ್ತಿಯಿರುವ, ಸೇವಾ ಮನೋಭಾವವುಳ್ಳ ವ್ಯಕ್ತಿಗಳು ಮುಂದೆ ಬರಬೇಕು. ಅಂತಹವರ ಬಗ್ಗೆ ಅಧ್ಯಕ್ಷರ ಗಮನಕ್ಕೆ ತರಬೇಕು” ಎಂದು ಈ ಸಂದರ್ಭದಲ್ಲಿ ವಿನಂತಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, “ಸಮಾಜವು ಸಣ್ಣದಾದರೂ ಬಹಳ ಸ್ವಾಭಿಮಾನಿ ಮತ್ತು ಕಷ್ಟಪಟ್ಟು ದುಡಿಯುವ ಸಮಾಜವಾಗಿದೆ. ಅಂಬಾಭವಾನಿ ಮೂರ್ತಿಯು ದುರ್ಗಾಂಬಿಕಾ ಮತ್ತು ಚೌಡೇಶ್ವರಿ ದೇವಿಯಷ್ಟೇ ಕಳೆ ಹಾಗೂ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.
ಸಮಾಜದವರಿಗೆ ಸರ್ಕಾರಿ ಸೌಲಭ್ಯಗಳು ತಲುಪಲು ಈ-ಸೇವಾ ಕೇಂದ್ರವು ಮೊದಲ ಆದ್ಯತೆ ನೀಡುವ ಅಗತ್ಯವಿದೆ. ಸಮಾಜದ ಯಾವುದೇ ಕೆಲಸಗಳಿಗೆ ಮನೆಯ ಮಗನಂತೆ ಕೆಲಸ ಮಾಡುವುದಾಗಿ ಇದೇ ವೇಳೇ ಶ್ರೀನಿವಾಸ ದಾಸಕರಿಯಪ್ಪ ಭರವಸೆ ನೀಡಿದರು.
ಸಮಾಜದ ಜಿಲ್ಲಾಧ್ಯಕ್ಷ ಗಿರಿಧರ್ ಡಿ.ಮೆಹರ್ವಾಡೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರಿಬಸಪ್ಪ ದಪೇರ್. ಚಂದ್ರಪ್ಪ, ಹರಿಹರ ಎಸ್ಎಸ್ಕೆ ಸಮಾಜದ ಅಧ್ಯಕ್ಷ ಶ್ರೀನಿವಾಸ ಮೆಹರವಾಡೆ ದಾವಣಗೆರೆ ಜಿಲ್ಲಾ ಸಂಚಾಲಕರಾದ ಸಂದೀಪ್ ಭೂತೆ, ಎಸ್ಎಸ್ಕೆ ಸಮಾಜದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ.ಸೋಳಂಕಿ, ಮಹಿಳಾ ಮಂಡಳಿ ಗೌರವಾಧ್ಯಕ್ಷರಾದ ಶುಭಂಜಲಿ ಕಠಾರೆ, ಶ್ರೀಮತಿ ನಾಗರತ್ನ ಬದ್ದಿ, ಜ್ಯೋತಿ ಆಚಾರ್ಯ, ತರುಣ ಮಂಡಳಿ ಅಧ್ಯಕ್ಷರಾದ ಭರತ್ ಕಿಶನ್ ಲದ್ವಾ ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿವೇಕ್ ಎಲ್.ಬದ್ದಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.