ಅಳಿಯನ ಹೊಸ ಮನೆಯೊಳಗೆ ಮಗಳ ಮೃತದೇಹ ಹೂತ ಅಪ್ಪ..

ಅಳಿಯನ ಹೊಸ ಮನೆಯೊಳಗೆ ಗುಂಡಿ ತೆಗೆದು ಮಗಳ ಮೃತದೇಹ ಹೂತ ಅಪ್ಪ.. ಪಾವಗಡದಲ್ಲಿ ಹೆತ್ತ ತಂದೆ ಆಕ್ರೋಶ

ವೀರಮಾರ್ಗ ನ್ಯೂಸ್ : ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಂಡಾದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಮಗಳ ಸಾವಿನಿಂದ ಕಂಗಾಲಾದ ತಂದೆ, ಅಳಿಯನ ಮನೆಯ ನಡುಮನೆಯಲ್ಲೇ ಮಗಳ ಶವವನ್ನು ಹೂತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ತುಮಕೂರು: ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಂಡಾದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಮಗಳ ಸಾವಿನಿಂದ ಕಂಗಾಲಾದ ತಂದೆ, ಅಳಿಯನ ಮನೆಯ ನಡುಮನೆಯಲ್ಲೇ ಮಗಳ ಶವವನ್ನು ಹೂತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಏನಿದು ಘಟನೆ?

ಪಾವಗಡ ಮೂಲದ ಶೃತಿ ಎಂಬ ಗೃಹಿಣಿ ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿನಿಂದ ತೀವ್ರವಾಗಿ ನೊಂದ ತಂದೆ ರಾಜುನಾಯ್ಕ, ಮಗಳ ಅಂತ್ಯಸಂಸ್ಕಾರವನ್ನು ವಿಭಿನ್ನವಾಗಿ ಮಾಡಲು ನಿರ್ಧರಿಸಿದ್ದರು. ಪಾವಗಡ ತಾಲೂಕಿನ ಭೂಪೂರು ತಾಂಡಾದಲ್ಲಿರುವ ಅಳಿಯ ಪವನ್ ಕಲ್ಯಾಣ್ ಅವರ ನಿರ್ಮಾಣ ಹಂತದ ಮನೆಗೆ ಶೃತಿಯ ಮೃತದೇಹವನ್ನು ತರಲಾಗಿತ್ತು.

ನಡುಮನೆಯಲ್ಲೇ ಅಂತ್ಯಕ್ರಿಯೆ!

ಅಳಿಯ ಮನೆ ಕಟ್ಟಲು ನಾನೇ ಹಣ ಕೊಟ್ಟಿದ್ದೆ. ನನ್ನ ಮಗಳ ನೆನಪಿಗಾಗಿ ಇಲ್ಲೇ ಅವಳ ಸಮಾಧಿ ಮಾಡಿ ಸ್ಮಾರಕ ಮಾಡುತ್ತೇನೆ ಎಂದು ಪಟ್ಟು ಹಿಡಿದ ರಾಜುನಾಯ್ಕ, ಮನೆಯ ನಡುಮನೆಯಲ್ಲಿ ಹೊಸದಾಗಿ ಹಾಕಿದ್ದ ಟೈಲ್ಸ್ ಕಲ್ಲುಗಳನ್ನು ಕತ್ತರಿಸಿ ಗುಂಡಿ ತೋಡಿದ್ದರು. ಅಳಿಯನ ಮನೆಯ ಒಳಗೇ ಮಗಳ ಶವವನ್ನು ಹೂತಿಟ್ಟು ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಪೊಲೀಸರ ಎಂಟ್ರಿ ಮತ್ತು ಮೃತದೇಹ ಹೊರಕ್ಕೆ

ಮನೆಯೊಳಗೆ ಶವ ಹೂತಿರುವ ವಿಷಯ ತಿಳಿಯುತ್ತಿದ್ದಂತೆ ತಿರುಮಣಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮನೆಯೊಳಗೆ ಶವ ಸಂಸ್ಕಾರ ಮಾಡುವುದು ಕಾನೂನುಬಾಹಿರ ಮತ್ತು ಅಸಮರ್ಪಕ ಎಂದು ತಂದೆ ರಾಜುನಾಯ್ಕನ ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಸುದೀರ್ಘ ಚರ್ಚೆಯ ನಂತರ ಪೊಲೀಸರ ಮಾತಿಗೆ ಒಪ್ಪಿದ ರಾಜುನಾಯ್ಕ, ಮನೆಯೊಳಗೆ ಹೂತಿದ್ದ ಮಗಳ ಮೃತದೇಹವನ್ನು ಹೊರತೆಗೆಯಲು ಸಮ್ಮತಿಸಿದರು.

ಬಳಿಕ ಪೊಲೀಸರ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು, ಅಳಿಯ ಪವನ್ ಕಲ್ಯಾಣ್‌ಗೆ ಸೇರಿದ ಜಮೀನಿನಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಮಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅಳಿಯನ ಮೇಲಿನ ಆಕ್ರೋಶದ ಹಿನ್ನೆಲೆಯಲ್ಲಿ ತಂದೆ ಈ ರೀತಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವಿಲಕ್ಷಣ ಘಟನೆಯಿಂದಾಗಿ ಭೂಪೂರು ತಾಂಡಾದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.