ವರದಿಗೆ ಸಚಿವರ ವಿರೋಧ ಇಲ್ಲ

ವರದಿಗೆ ಸಚಿವರ ವಿರೋಧ ಇಲ್ಲ
ವೀರಮಾರ್ಗ ನ್ಯೂಸ್ ಬೆಂಗಳೂರು :
ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ವರದಿ (ಜಾತಿ ಗಣತಿ)ಗೆ ಯಾವ ಸಚಿವರ ವಿರೋಧವೂ ಇಲ್ಲ. ಸಂಪುಟ ಸಭೆಯಲ್ಲಿ ಯಾರೂ ಏರಿದ ಧ್ವನಿಯಲ್ಲಿ ಮಾತನಾಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂದಿನ ಸಚಿವ ಸಂಪುಟದಲ್ಲಿ ವರದಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ವರದಿ (ಜಾತಿ ಗಣತಿ)ಗೆ ಸಚಿವ ಸಂಪುಟದಲ್ಲಿ ಸಚಿವರುಗಳು ವಿರೋಧ ವ್ಯಕ್ತಪಡಿಸಿದ್ದಾರೆ, ಏರಿದ ಧ್ವನಿಯಲ್ಲಿ ಮಾತನಾಡಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿ, ಜಾತಿ ಗಣತಿಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ, ಯಾವ ನಡುವೆಯೂ ವಾಗ್ದಾವ ನಡೆದಿಲ್ಲ. ಯಾರೂ ಏರಿದ ಧ್ವನಿಯಲ್ಲಿ, ದೊಡ್ಡ ಗಂಟಲಲ್ಲಿ ಮಾತನಾಡಿಲ್ಲ ಎಂದರು.

ಜಾತಿ ಗಣತಿ ವರದಿಯ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಗಳು ಆಗಿವೆ. ಎಲ್ಲಾ ಸಚಿವರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಹೇಳಿದ್ದೇನೆ. ಅವರುಗಳು ವರದಿಯನ್ನು ಓದಿಕೊಂಡು ಬಂದು ಆ ಬಗ್ಗೆ ಸಚಿವ ಸಂಪುಟದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಆಧರಿಸಿ ಒಂದು ತೀರ್ಮಾನ ಮಾಡುತ್ತೇವೆ ಎಂದರು.
ಸಚಿವ ಸಂಪುಟದಲ್ಲಿ ಜಾತಿ ಗಣತಿಗೆ ನಾನು ನನ್ನ ಅಭಿಪ್ರಾಯವನ್ನು ಹೇಳಿಲ್ಲ. ಮುಂದಿನ ಸಚಿವ ಸಂಪುಟದಲ್ಲಿ ನಾನು ವರದಿ ಬಗ್ಗೆ ಮಾತನಾಡುತ್ತೇನೆ. ಮೊದಲು ಎಲ್ಲಾ ಸಚಿವರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಲಿ. ನಂತರ ನಾನು ಮಾತನಾಡುತ್ತೇನೆ ಎಂದು ಅವರು ಹೇಳಿದರು.
ರಾಹುಲ್ ಜತೆ ಚರ್ಚೆ :ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ಗಾಂಧಿ ತಮಗೆ ಪತ್ರ ಬರೆದಿದ್ದಾರೆ ಎಂಬುದು ಸರಿಯಲ್ಲ. ಅವರು ಯಾವುದೇ ಪತ್ರ ಬರೆದಿಲ್ಲ. ಆದರೆ ಅವರ ಜತೆ ನಾನು ಈ ವರದಿ ಜಾರಿ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರ ಒಪ್ಪಿಗ ಪಡೆದೇ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡನೆ ಮಾಡಲಾಗಿದೆ. ಅವರ ಒಪ್ಪಿಗೆ ಇಲ್ಲದೆ ಸಂಪುಟ ಸಭೆಯಲ್ಲಿ ವರದಿ ಮಂಡನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಮೀಕ್ಷೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ. ಈ ಸಮೀಕ್ಷೆಯಲ್ಲಿ ಕೆಲ ಜಾತಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂಬ ವರದಿಗಳು ಸರಿಯಲ್ಲ. ಯಾವ ಜಾತಿ ಸಮುದಾಯಗಳಿಗೂ ಅನ್ಯಾಯವಾಗಲು ಬಿಡಲ್ಲ ಎಂದು ಪುನರುಚ್ಚರಿಸಿದರು.
ಮುಸಲ್ಮಾನರಿಗೆ, ಹಿಂದುಳಿದವರಿಗೆ ಮಾತ್ರವಲ್ಲದೆ ಎಲ್ಲ ಧರ್ಮದ, ಎಲ್ಲ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಶಕ್ತಿ ತುಂಬಬೇಕು ಇದೇ ನಮ್ಮ ಗುರಿ ಎಂದರು.
ಯಾವ ಜಾತಿಗೂ ಅನ್ಯಾಯವಾಗಬಾರದು ಸರ್ಕಾರದ ಉದ್ಧೇಶ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಸಂವಿಧಾನ ಜಾರಿಯಾಗಿ ೭೫ ವರ್ಷವಾಗಿದ್ದರೂ ಬಡವ ಬಡವನಾಗಿಯೇ ಉಳಿಯಬೇಕೇ ಸಮಾನತೆ ಬೇಡವೇ ಜಾತಿಗೆ ಅಂಟಿಕೊಂಡೇ ಇರಬೇಕೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಈ ಸಮೀಕ್ಷೆಯ ಮೆರಿಟ್ ಬಗ್ಗೆ ನಾನು ಈಗ ಮಾತನಾಡಲ್ಲ. ಅದನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಾತನಾಡುತ್ತೇನೆ ಎಂದರು.
ಈ ಜಾತಿ ಗಣತಿ ವರದಿ ಬಗ್ಗೆ ಯಾರ ವಿರೋಧವೂ ಇಲ್ಲ. ಯಾರೂ ಈ ಬಗ್ಗೆ ವಾಗ್ವಾದ ನಡೆಸಿಲ್ಲ ಎಂಬುದನ್ನು ಹೇಳಿದ್ದನೆ. ಈಗ ಅಷ್ಟು ಸಾಕು, ಮುಂದಿನ ಸಚಿವರುಗಳು ಅಭಿಪ್ರಾಯ ಕೊಡಲಿ. ನಂತರ ಏನು ತೀರ್ಮಾನ ಮಾಡುತ್ತೇವೆ ಎಂಬುದನ್ನು ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಶೋಕ್ ಸತ್ಯ ಹೇಳಲ್ಲ : ಜಾತಿ ಗಣತಿಯ ಮೂಲ ಪ್ರತಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿರುವುದು ನಕಲಿ ವರದಿ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರ್. ಅಶೋಕ್ ಯಾವತ್ತಾದರೂ ಸತ್ಯ ಹೇಳಿದ್ದಾರಾ, ಅವರು ಹೇಳುವುದೆಲ್ಲಾ ಸುಳ್ಳು ಎಂದು ಗರಂ ಆದರು. ಸಾಮಾಜಿಕ ಸಮೀಕ್ಷೆಯ ಮೂಲ ಪ್ರತಿ ನನ್ನ ಬಳಿ ಇರಲು ಹೇಗೆ ಸಾಧ್ಯ ಎಂದು ಅವರು ಹೇಳಿದರು.