ಹಾಸ್ಟೆಲ್‌ನಲ್ಲಿ ದಾರುಣ ಅಂತ್ಯ ಕಂಡ ಪ್ರತಿಭಾವಂತ ವಿದ್ಯಾರ್ಥಿನಿ!

ವೀರಮಾರ್ಗ ನ್ಯೂಸ್ : ದಾವಣಗೆರೆ ಟಿಮ್ ಅಕಾಡೆಮಿ ಕಾಲೇಜು ಹಾಸ್ಟೆಲ್‌ನಲ್ಲಿ ದಾರುಣ ಅಂತ್ಯ ಕಂಡ ಪ್ರತಿಭಾವಂತ ವಿದ್ಯಾರ್ಥಿನಿ! ಈಗಷ್ಟೇ ಸೆಕೆಂಡ್‌ ಪಿಯುಸಿಗೆ ಕಾಲಿಟ್ಟು, ಕಣ್ಣ ತುಂಬಾ ಹತ್ತಾರು ಕನಸುಗಳನ್ನು ಹೊತ್ತು ಹೆಜ್ಜೆ ಇಡುತ್ತಿದ್ದ ಆ ಕರುಳ ಕುಡಿ ಇಂದು ಹೆತ್ತವರನ್ನು ಅನಾಥವಾಗಿಸಿ ಹೊರಟುಹೋಗಿದ್ದಾಳೆ. ನಾಲ್ಕು ದಿನಗಳ ಹಿಂದಷ್ಟೇ ನೂತನ ಮನೆಯ ಗೃಹಪ್ರವೇಶದಲ್ಲಿ ನಗುನಗುತ್ತಾ ಎಲ್ಲರ ಕಣ್ಮಣಿಯಾಗಿದ್ದವಳು, ನಿನ್ನೆ ಸಾವನಪ್ಪಿದ್ದಾಳೆ
ದಾವಣಗೆರೆಯ ಪ್ರತಿಷ್ಠಿತ ಟೀಮ್‌ ಅಕಾಡೆಮಿ ಹಾಸ್ಟೆಲ್‌ನಲ್ಲಿ ನಡೆದ ಈ ದುರಂತ ಈಗ ನಮ್ಮನೆಲ್ಲ ಬೆಚ್ಚಿಬೀಳಿಸಿದೆ.

ನಮ್ಮ ಊರಿನ ಪಕ್ಕದ ಕುರುವತ್ತಿ ಗ್ರಾಮದ ವಿಜಯನಗರ (ಹೂವಿನಹಡಗಲಿ) ಜಿಲ್ಲೆಯ ನಿಂಗಪ್ಪ ಎಂಬುವವರ 17 ವರ್ಷದ ಮಗಳು ರಂಜಿತಾ. ದಾವಣಗೆರೆಯ ಟೀಮ್‌ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ
ಓದುತಿದ್ದ ಹುಡುಗಿ ಘಟನೆ ನಡೆದ ದಿನ ಬೆಳಗ್ಗೆಯೂ ತಾಯಿಗೆ ಫೋನ್‌ ಮಾಡಿದ್ದ ರಂಜಿತಾ ಎಂದಿನಂತೆ ಪ್ರೀತಿಯಿಂದಲೇ ಮಾತನಾಡಿದ್ದಳು. ಆದರೆ ಸಂಜೆ 5:30ರ ಸುಮಾರಿಗೆ ಕಾಲೇಜಿನಿಂದ ‘ಹಾಸ್ಟೆಲ್ ರೂಮ್‌ಗೆ ಹೋಗುತ್ತೇನೆ’ ಎಂದು ಒಬ್ಬಳೇ ತೆರಳಿದ್ದಾಳೆ. ರಾತ್ರಿ 8:30ರ ಸುಮಾರಿಗೆ ಜೊತೆಗಿದ್ದ ಸ್ನೇಹಿತೆಯರು ಕೊಠಡಿಗೆ ಬಂದು ಎಷ್ಟೇ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗಾಬರಿಗೊಂಡ ವಿದ್ಯಾರ್ಥಿನಿಯರು ಹಾಸ್ಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಕಂಡ ದೃಶ್ಯ ಎಂಥವರ ಎದೆಯನ್ನೂ ನಡುಗಿಸುವಂತಿತ್ತು—ಕಿಟಕಿಯ ಸರಳಿಗೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ರಂಜಿತಾ ಶವ ಪತ್ತೆಯಾಗಿದೆ.
ಮೂರೇ ಅಡಿ ಎತ್ತರದ ಕಿಟಕಿ: ಮೂಡಿದೆ ಹತ್ತಾರು ಅನುಮಾನ!
ಈ ಸಾವು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ಬೇರೆಯದ್ದೇ ಹುನ್ನಾರವಿದೆ ಎಂಬುದು ಕುಟುಂಬಸ್ಥರ ಗಂಭೀರ ಆರೋಪ.
ಕೇವಲ 3 ಅಡಿ ಎತ್ತರದ ಕಿಟಕಿಯಲ್ಲಿ ಒಬ್ಬ ವ್ಯಕ್ತಿ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ?
ಕೊಠಡಿಯಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ.
ಬೆಳಗ್ಗೆಯಷ್ಟೇ ಮನೆಯವರೊಂದಿಗೆ ಉತ್ಸಾಹದಿಂದ ಮಾತನಾಡಿದ ಹುಡುಗಿ ಸಂಜೆಯಾಗುವಷ್ಟರಲ್ಲಿ ಇಂಥ ನಿರ್ಧಾರಕ್ಕೆ ಬರಲು ಕಾರಣವೇನು?
ಹೆತ್ತವರ ಪಾಲಿನ ನಂದಾದೀವಿಗೆಯಂತಿದ್ದ ಮಗಳು ಅರ್ಧ ದಾರಿಯಲ್ಲೇ ಬಾಡಿ ಹೋಗಿದ್ದಾಳೆ. ಇದು ನಿಜಕ್ಕೂ ಆತ್ಮಹತ್ಯೆಯಾ ಅಥವಾ ವ್ಯವಸ್ಥಿತ ಕೃತ್ಯವಾ ಎಂಬುದು ನಮಗೆ ಅನುಮಾನವಿದೆ ಇದರಲ್ಲಿ ಪಾರದರ್ಶಕ ತನಿಖೆ ಆಗಬೇಕು ದಾವಣಗೆರೆಯ ವರಿಷ್ಠಾಧಿಕಾರಿಗಳು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಹೆತ್ತವರ ಕಣ್ಣಿರಿಗೆ ನ್ಯಾಯ ದೊರಕಿಸಬೇಕು..

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು