“ನ್ಯಾಯಾಲಯದಲ್ಲಿ ಮತ್ತೆ ಶೂದಾಳಿ” ನ್ಯಾಯಾಂಗ ಭದ್ರತೆಗೆ ಗಂಭೀರ ಪ್ರಶ್ನೆ..?
ಗಾಂಧಿನಗರ/ಅಹಮದಾಬಾದ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ
ವೀರಮಾರ್ಗ ನ್ಯೂಸ್ : ಗಾಂಧಿನಗರ/ಅಹಮದಾಬಾದ್ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ದೆಹಲಿಯಲ್ಲಿ ನಡೆದ ಶೂ ದಾಳಿಯ ಇನ್ನೂ ಒಂದು ವಾರವೂ ಕಳೆದಿಲ್ಲ. ಇದೇ ವೇಳೆ, ಇದರಂತೆಯೇ ಮತ್ತೊಂದು ಅಮಾನವೀಯ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ ಮಂಗಳವಾರ ನಡೆದಿದೆ.
ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ, ಆರೋಪಿಯೊಬ್ಬರು ಹೆಚ್ಚುವರಿ ನ್ಯಾಯಾಧೀಶ ಎಂ.ಪಿ. ಪುರೋಹಿತ್ ಅವರ ಕಡೆ ಶೂ ಎಸೆದಿದ್ದಾರೆ. ಅದೃಷ್ಟವಶಾತ್, ನ್ಯಾಯಾಧೀಶರಿಗೆ ಯಾವುದೇ ಗಾಯಗಳಾಗಿಲ್ಲ. ಕೋಪಗೊಂಡ ಆ ವ್ಯಕ್ತಿಯನ್ನು ಕೂಡಲೇ ನ್ಯಾಯಾಲಯದ ಸಿಬ್ಬಂದಿ ಹಾಗೂ ಪೊಲೀಸರು ವಶಕ್ಕೆ ಪಡೆದರು.
ಈ ಘಟನೆ 1997ರಲ್ಲಿ ಗಾಂಧಿನಗರದ ಗೋಮಿಪುರ ಪ್ರದೇಶದಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದೆ. ದೂರುದಾರನ ತಂದೆ ಕೆಲ ಯುವಕರಿಂದ ಹಲ್ಲೆಗೆ ಒಳಗಾಗಿದ್ದರು. ಪ್ರಕರಣ ದಾಖಲಾದರೂ, 2017ರಲ್ಲಿ ಮೆಟ್ರೋಪಾಲಿಟನ್ ನ್ಯಾಯಾಲಯ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತು. ಇದಕ್ಕೆ ವಿರೋಧವಾಗಿ ಮೇಲ್ಮನವಿ ಸಲ್ಲಿಸಿದ ದೂರುದಾರನ ಮನವಿಯನ್ನು ಸೆಷನ್ಸ್ ಕೋರ್ಟ್ ಅಕ್ಟೋಬರ್ 13, 2025ರಂದು ವಜಾಗೊಳಿಸಿತು.
ಈ ತೀರ್ಪಿನಿಂದ ಕೋಪಗೊಂಡ ದೂರುದಾರ ನ್ಯಾಯಾಲಯದಲ್ಲೇ ಕೂಗಿ ಅಶಿಸ್ತಿನ ವರ್ತನೆ ನಡೆಸಿ, ಕೋಪದ ಹೊತ್ತಿನಲ್ಲಿ ನ್ಯಾಯಾಧೀಶರ ಕಡೆ ಶೂ ಎಸೆದಿದ್ದಾನೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.
ಸಾರ್ವಜನಿಕ ಅಭಿಯೋಜಕ ಸುಧೀರ್ ಬ್ರಹ್ಮಭಟ್ ತಿಳಿಸಿದಂತೆ, ಹೆಚ್ಚುವರಿ ನ್ಯಾಯಾಧೀಶ ಎಂ.ಪಿ. ಪುರೋಹಿತ್ ಅವರು ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬಾರದು ಹಾಗೂ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ವಿನಂತಿಸಿದ್ದಾರೆ. ಅವರ ಈ ಕ್ಷಮಾಶೀಲ ಮನೋಭಾವವು ಗಮನ ಸೆಳೆಯುತ್ತದೆ.
ದೇಶಾದ್ಯಾಂತ ಆತಂಕ – ಭದ್ರತೆ ಹೆಚ್ಚಿಸುವ ಬೇಡಿಕೆ
ಸುಪ್ರೀಂ ಕೋರ್ಟ್ನಲ್ಲೇ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿಯ ಮೇಲೆ ಶೂ ಎಸೆದ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಇದೇ ರೀತಿಯ ದಾಳಿ ನಡೆದಿರುವುದು, ನ್ಯಾಯಾಂಗ ಭದ್ರತೆ ಬಗ್ಗೆ ದೇಶಾದ್ಯಾಂತ ಆತಂಕ ಮೂಡಿಸಿದೆ.
ಗುಜರಾತ್ ನ್ಯಾಯಾಂಗ ಸೇವಾ ಸಂಘ ಈ ದಾಳಿಯನ್ನು ತೀವ್ರವಾಗಿ ಖಂಡಿಸಿ, ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ.
ಆಕ್ರೋಶ ವ್ಯಕ್ತಪಡಿಸಲು ಕಾನೂನು ಒದಗಿಸಿರುವ ಅನೇಕ ಅವಕಾಶಗಳಿವೆ, ಮೇಲ್ಮನವಿ ಸಲ್ಲಿಸಬಹುದು, ಪುನರ್ವಿಚಾರಣೆ ಕೋರಿ ಅರ್ಜಿ ಹಾಕಬಹುದು, ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ನಡೆಸಬಹುದು. ಆದರೆ ನ್ಯಾಯಾಲಯದ ಆವರಣದಲ್ಲೇ ಅಶಿಸ್ತಿನ ವರ್ತನೆ ತೋರಿಸುವುದು, ನ್ಯಾಯಾಧೀಶರ ಮೇಲೆ ದೌರ್ಜನ್ಯ ಮಾಡಲು ಯತ್ನಿಸುವುದು, ಕೇವಲ ಕಾನೂನಿನ ಉಲ್ಲಂಘನೆಯಲ್ಲ; ಅದು ಸಂವಿಧಾನದ ಮೇಲಿನ ಅಪಮಾನವೂ ಹೌದು.
ಇಂತಹ ಘಟನೆಗಳು ನ್ಯಾಯಾಂಗದ ಮೇಲೆ ಸಾರ್ವಜನಿಕರಲ್ಲಿ ನಂಬಿಕೆಯನ್ನು ಕುಂದಿಸುವ ಅಪಾಯವಿದೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದವರನ್ನೇ ಮತ್ತೆ ಕಾನೂನಿನ ಮುಂದೆ ಅಪರಾಧಿಗಳನ್ನಾಗಿ ನಿಲ್ಲಿಸುವ ಪರಿಸ್ಥಿತಿ ಉಂಟಾಗಬಾರದು.