ವೀರಮಾರ್ಗ ನ್ಯೂಸ್ : ಹಾವೇರಿ : ಮಾಸೂರಿನ ಸ್ವಾತಿ ಬ್ಯಾಡಗಿ ಕೊಲೆ ಹಿಂದೆ ಲವ್ ಜಿಹಾದ್ ಎಂಬ ಆರೋಪ ಸುಳ್ಳು, ಇದಕ್ಕೆ ಸಾಕ್ಷಿ ಇಲ್ಲ. ಆರೋಪ ಮಾಡುವವರು ಸಾಕ್ಷಿ ಕೊಡುತ್ತಿಲ್ಲ ಆದರೆ, ಈ ಕೃತ್ಯ ಖಂಡನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಿರೇಕೆರೂರ ಕ್ಷೇತ್ರದ ಶಾಸಕ ಯು.ಬಿ ಬಣಕಾರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ.
ಅಪರಿಚಿತ ಶವ ಸಿಕ್ಕ ನಂತರ ಕಾನೂನು ಪ್ರಕಾರ ಅಂತ್ಯಕ್ರಿಯೆ ಮಾಡಿದ್ದಾರೆ. ಆಕೆಯ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸುವುದು ತಡವಾಗಿದೆ. ಹಾಗಾಗಿ, ಆಕೆಯ ಕುಟುಂಬದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾಪತ್ತೆ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಯುವತಿಯ ಪತ್ತೆ ಮಾಡಲು ಮುಂದಾದರು. ಅದು ಅಸಹಜ ಸಾವಲ್ಲ ಕೊಲೆ ಎಂಬುದು ಗೊತ್ತಾಯಿತು. ಕೂಡಲೇ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.
ಎಲ್ಲರೂ ಹೋರಿ ಹಬ್ಬದಲ್ಲಿ ಸ್ನೇಹಿತರಾದವರು. ಇದರಲ್ಲಿ ಹಿಂದು- ಮುಸ್ಲಿಂ ಎಂಬ ಭಾವನೆ ಇಲ್ಲ ಒಬ್ಬ ಮುಸ್ಲಿಂ, ಇಬ್ಬರು ಹಿಂದುಗಳು ಇದ್ದಾರೆ. ಶವ ಪರೀಕ್ಷೆಯಲ್ಲಿ ಕೊಲೆ ಎಂದು ಗೊತ್ತಾದ ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ.

ತಪ್ಪಿಸ್ಮರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ ಇದಕ್ಕೆ ಅಗತ್ಯವಾದ ಸಹಕಾರ ನೀಡುತ್ತೇವೆ ಎಂದರು.
ಸರ್ಕಾರದಿಂದ ಪರಿಹಾರದ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಸದ್ಯಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಬೇಕು. ದಿನಕ್ಕೊಂದು ಕಥೆ ಕಟ್ಟುವುದು ಬಿಡಬೇಕು. ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ದಿಕ್ಕು ತಪ್ಪಿಸುವ ಕೆಲಸ ಆಗಬಾರದು ಎಂದಷ್ಟೇ ಹೇಳಿದರು.