ವೀರಮಾರ್ಗ ನ್ಯೂಸ್ : ಸವಣೂರು : ವಿದ್ಯಾರ್ಥಿಗಳು ಶ್ರಮವಹಿಸಿ ಓದುವ ಮೂಲಕ ಉತ್ತಮ ಫಲಿತಾಂಶ ಪಡೆದು ಶಾಲೆಗೆ ಹಾಗೂ ಊರಿಗೆ ಕೀರ್ತಿ ತರುವ ಪ್ರಯತ್ನ ಮಾಡಿರಿ ಎಂದು ಅಮ್ಮಾ ಸಂಸ್ಥೆ(ರಿ)ಯ ಸಂಸ್ಥಾಪಕರು ಹಾಗೂ ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ ಹೇಳಿದರು.
ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಟಿಎಂಎಇಎಸ್ ಪ್ರೌಢ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅಮ್ಮಾ ಸಂಸ್ಥೆಯ ವತಿಯಿಂದ ಪೆನ್ನು- ಪೆನ್ಸಿಲ್ ವಿತರಣೆ ಮಾಡಿ ಪರೀಕ್ಷೆಗೆ ಶುಭ ಕೋರಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಹಂತ ಮಹತ್ವ ಪಡೆದಿದೆ. ಭವಿಷ್ಯದ ಶಿಕ್ಷಣಕ್ಕೆ ಈ ಫಲಿತಾಂಶ ಪ್ರೇರಣೆ ನೀಡಲಿದೆ.ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ ಗುರು ಬಳಗದವರು ಆಸಕ್ತಿದಾಯಕವಾಗಿ, ಶ್ರಮವಹಿಸಿ ವಿದ್ಯಾರ್ಥಿಗಳಿಗೆ ಭೋದನೆ ಮಾಡಿ, ಉತ್ತಮ ಮಾರ್ಗದರ್ಶನ ನೀಡಿದ್ದು, ಗುರುಗಳ ಶ್ರಮ ಸಾರ್ಥಕವಾಗಲು ಹಾಗೂ ತಮ್ಮ ಭವಿಷ್ಯ ಉತ್ತಮಗೊಳಿಸಲು ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರದ್ಧೆವಹಿಸುವುದು ಅಗತ್ಯವಿದೆ ಎಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿಂಗಪ್ಪ ಆರೇರ ಅವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಎನ್.ಎಮ್. ಪಾಟೀಲ, ಎಸ್.ಬಿ. ಗುಡಗೇರಿ, ಸಿ.ಎಂ. ಕಡೇಮನಿ, ಯು ರವಿಚಂದ್ರ, ಆರ್.ಸಿ. ಜಂಗಳೆಣ್ಣನವರ, ಎ.ಎ. ಸೆರೆವಾಡ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳು ಉತ್ತಮ ಫಲಿತಾಂಶದಿಂದ ಶಾಲೆಗೆ ಕೀರ್ತಿ ತರಲಿ : ಆರೇರ
